ವಿವಿ ಸಂಶೋಧನಾ ಬರಹಗಳಲ್ಲಿ ನಕಲಿ ಹೆಚ್ಚಾಗಿದೆ: ಬೆಂವಿವಿ ಕುಲಪತಿ ವೇಣುಗೋಪಾಲ್
ಬೆಂಗಳೂರು, ನ.28: ವಿಶ್ವವಿದ್ಯಾಲಯಗಳ ಸಂಶೋಧನಾ ಬರಹಗಳಲ್ಲಿ ನಕಲಿ ಹೆಚ್ಚಾಗಿರುವುದರಿಂದ ದೇಶದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ವೇಣುಗೋಪಾಲ್ ಬೇಸರ ವ್ಯಕ್ತಪಡಿಸಿದರು.
ಗುರುವಾರ ಬೆಂಗಳೂರು ವಿಶ್ವವಿದ್ಯಾಲಯದ ಯುಜಿಸಿ ಮಹಿಳಾ ಅಧ್ಯಯನ ಕೇಂದ್ರದ ವತಿಯಿಂದ ಇಲ್ಲಿನ ಪ್ರೊ.ಕೆ.ವೆಂಕಟಗಿರಿಗೌಡ ಸ್ಮಾರಕ ಸಭಾಂಗಣದಲ್ಲಿ ಆಯೋಜಿಸಿದ್ದ ಲೇಖಕ ಡಾ.ಎಂ.ಸಿದ್ಧಪ್ಪ ಬೆಳಗಟ್ಟಿರವರ ‘ಉತ್ತರಾಣಿ’, ‘ಮ್ಯಾಸ ಬೇಡರ ಮಹಿಳೆ’, ‘ಪಾಶ್ಚಾತ್ಯ ಸ್ತ್ರೀವಾದಿ ಚಿಂತಕರು’, ‘ಕಡಗೋಲು’ ಹಾಗೂ ‘ಪಾರಿಜಾತ’ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಸಂಶೋಧನಾ ಬರಹಗಳು, ವಿಚಾರಗೋಷ್ಠಿಗಳು, ಕಾರ್ಯಾಗಾರಗಳನ್ನು ನಡೆಸುವುದರ ಕಡೆಗೆ ಹೆಚ್ಚಿನ ಗಮನ ಕೊಡಬೇಕು. ಆಗ ಮಾತ್ರ ಪ್ರಾಧ್ಯಾಪಕ ಹುದ್ದೆಗೆ ಘನತೆ ಬರುತ್ತದೆ. ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೂ ಇದರಿಂದ ಪ್ರೇರಣೆ ಸಿಗುವಂತಾಗುತ್ತದೆ ಎಂದು ಅವರು ಹೇಳಿದರು.
ಪ್ರಾಧ್ಯಾಪಕರು ತಮ್ಮ ವಿದ್ಯಾರ್ಥಿಗಳ ಹಿತವನ್ನು ಬಯಸಬೇಕು. ಆದರೆ, ಹಲವು ಪ್ರಾಧ್ಯಾಪಕರು ತಮ್ಮಲ್ಲಿ ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನಗತ್ಯ ಕಿರುಕುಳ ನೀಡುವುದು, ಸಂಶೋಧನೆಗೆ ಅಡ್ಡಿ ಪಡಿಸುವಂತಹ ಘಟನೆಗಳು ನಡೆಯುತ್ತವೆ. ಪ್ರಾಧ್ಯಾಪಕರು ಇಂತಹ ಮನಸ್ಥಿತಿಯನ್ನು ಹೊರಬಂದಾಗ ಮಾತ್ರ ವಿಶ್ವವಿದ್ಯಾಲಯಗಳ ಬೆಳವಣಿಗೆ ಸಾಧ್ಯವೆಂದು ಅವರು ಹೇಳಿದರು.
ಕತೆ, ಕಾದಂಬರಿ, ಲೇಖನಗಳನ್ನು ಬರೆಯುವುದು ಸುಲಭವಾದ ಕೆಲಸವಲ್ಲ. ನಿರಂತರವಾದ ಅಧ್ಯಯನ, ಶಿಸ್ತಿನಿಂದ ಮಾತ್ರ ಉತ್ತಮವಾದ ಕೃತಿಗಳನ್ನು ರಚಿಸಲು ಸಾಧ್ಯ. ನಾವು ಬರೆದ ಪುಸ್ತಕಕ್ಕೆ ಓದುಗರಿಂದ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾದರೆ, ಅದೇ ಲೇಖಕನೊಬ್ಬನಿಗೆ ಸಿಗುವ ಅತ್ಯಂತ ದೊಡ್ಡ ಗೌರವವೆಂದು ಅವರು ಹೇಳಿದರು.
ಸಂಸ್ಕೃತ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪದ್ಮಾಶೇಖರ್ ಮಾತನಾಡಿ, ಮಹಿಳಾ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿರುವ ಲೇಖಕ ಡಾ.ಎಂ.ಸಿದ್ಧಪ್ಪ ಬೆಳಗಟ್ಟಿರದು ಸ್ತ್ರೀಕೇಂದ್ರಿತ ಚಿಂತನಾ ಕ್ರಮವಾಗಿದೆ. ಇದನ್ನು ಬರಹ ರೂಪಕ್ಕೆ ತಂದಿರುವ ಅವರ ಕಾರ್ಯ ಶ್ಲಾಘನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇವತ್ತು ಬಿಡುಗಡೆಯಾಗುತ್ತಿರುವ ಡಾ.ಎಂ.ಸಿದ್ಧಪ್ಪರ ಐದು ಕೃತಿಗಳು ಇವತ್ತಿನ ಸಮಾಜಕ್ಕೆ ತೀರ ಅಗತ್ಯವಾಗಿದೆ. ಈ ಕೃತಿಗಳು ಓದುಗರಲ್ಲಿ ಮಹಿಳಾ ಸಮುದಾಯದ ಕುರಿತು ವಿವಿಧ ಮಗ್ಗಲುಗಳಲ್ಲಿ ಚಿಂತಿಸುವಂತೆ ಪ್ರೇರೇಪಿಸಬಲ್ಲವು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ನಾಟಕಕಾರ ರಾಜಪ್ಪ ದಳವಾಯಿ, ಲೇಖಕ ಡಾ.ಎಂ.ಸಿದ್ಧಪ್ಪ ಬೆಳಗಟ್ಟಿ, ವಿಶ್ವವಿದ್ಯಾಲಯದ ಕುಲಸಚಿವ ಬಿ.ಕೆ.ರವಿ, ಪ್ರಕಾಶಕ ಬಿ.ಕೆ.ಸುರೇಶ್ ಮತ್ತಿತರರಿದ್ದರು.