ಅಪ್ರಾಪ್ತ ಬಾಲಕನ ಅಪಹರಣ: ಆರೋಪಿಗಳಿಗೆ ಗುಂಡೇಟು, ಬಂಧನ
ಬೆಂಗಳೂರು, ಡಿ.1: ಅಪ್ರಾಪ್ತ ಬಾಲಕನನ್ನು ಅಪಹರಣ ಮಾಡಿದ್ದ ಆರೋಪ ಪ್ರಕರಣ ಸಂಬಂಧ ಆರೋಪಿಗಳ ಮೇಲೆ ಪಿಸ್ತೂಲಿನಿಂದ ಗುಂಡು ಹೊಡೆದು, ಬಂಧಿಸುವಲ್ಲಿ ಇಲ್ಲಿನ ಬಾಣಸವಾಡಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಥಣಿಸಂದ್ರ ನಿವಾಸಿ ಮುಬಾರಕ್ ಎಂಬಾತ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದು, ಈತನ ಸ್ನೇಹಿತರಾದ ಅಯಾಝ್ ಮತ್ತು ಮೊಯಿನ್ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ಕಮ್ಮನಹಳ್ಳಿಯ ಹೋಟೆಲ್ ಉದ್ಯಮಿ ಝಾಕಿರ್ ಅಲಿ ಅವರ 13 ವರ್ಷದ ಪುತ್ರನನ್ನು ಶನಿವಾರ ಶಾಲೆಯ ಬಳಿಯಿಂದ ಆರೋಪಿಗಳು ಅಪಹರಣ ಮಾಡಿದ್ದರು. ಬಳಿಕ, ಝಾಕಿರ್ ಅಲಿ ಅವರಿಗೆ ಕೆಲವರು ಮೊಬೈಲ್ ಕರೆ ಮಾಡಿ, ಹಣ ನೀಡುವಂತೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.
ದೂರಿನ್ವಯ ರವಿವಾರ ಕಾರ್ಯಾಚರಣೆ ನಡೆಸಿದ ಪೊಲೀಸರು, ನಗರದ ಸಾರಾಯಿಪಾಳ್ಯದ ಬಳಿ ದುಷ್ಕರ್ಮಿಗಳು ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಬಳಿಕ, ಆರೋಪಿಗಳಿಗೆ ಶರಣಾಗುವಂತೆ ಸೂಚಿಸಿದರೂ, ಮುಬಾರಕ್, ಪೊಲೀಸ್ ಪೇದೆ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ, ಇನ್ಸ್ಪೆಕ್ಟರ್ ಅಜಯ್ ಸಾರಥಿ ಆರೋಪಿಯ ಕಾಲಿಗೆ ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ ಎಂದು ತಿಳಿದುಬಂದಿದೆ.