ದೌರ್ಜನ್ಯ ಖಂಡಿಸಿ ಡಿಸಿಎಂ ಮನೆಯೆದುರು ದಲಿತರಿಂದ ಅನಿರ್ದಿಷ್ಟಾವಧಿ ಧರಣಿ
ಬೆಂಗಳೂರು, ಡಿ.4: ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ.ಕೃಷ್ಣಪ್ಪ ಸ್ಥಾಪಿತ)ಯ ಹೊಸದುರ್ಗ ತಾಲೂಕು ಶಾಖೆ ಹಾಗೂ ಭ್ರಷ್ಟಾಚಾರ ವಿರೋಧಿ ಆಂದೋಲನ, ಚಿತ್ರದುರ್ಗ ಇವುಗಳ ನೇತೃತ್ವದಲ್ಲಿ ದಲಿತರು ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರ ನಿವಾಸದೆದುರು ಮಂಗಳವಾರ ಬೆಳಗ್ಗೆಯಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ಹೊಸದುರ್ಗ ತಾಲೂಕು, ದೊಡ್ಡಘಟ್ಟ ಹಾಗೂ ಜಂತಿಕೊಳಲು ಗ್ರಾಮಗಳಲ್ಲಿ ದಲಿತರ ಮೇಲೆ ನಡೆದಿರುವ ದೌರ್ಜನ್ಯವನ್ನು ಖಂಡಿಸಿ ಹಾಗೂ ನೊಂದ ಸಂತ್ರಸ್ತರಿಗೆ 1989ರ ದೌರ್ಜನ್ಯ ಕಾನೂನು ನಿಷೇಧ ಕಾಯ್ದೆಯಡಿ ನೀಡಬೇಕಾಗಿರುವ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಉಪ ಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಅವರ ಬೆಂಗಳೂರಿನ ಶಿವಾನಂದಂ ಸ್ಟೋರ್ಸ್ ಬಳಿಯ ಸರಕಾರಿ ನಿವಾಸದ ಎದುರುವ ಈ ಧರಣಿ ಹಮ್ಮಿಕೊಳ್ಳಲಾಗಿದೆ.