‘ದಲಿತ ಸಿಎಂ’ ಹಣೆಪಟ್ಟಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ತೀವ್ರ ಆಕ್ರೋಶ
ಬೆಂಗಳೂರು, ಡಿ. 4: ಪದೇ ಪದೇ ನನ್ನನ್ನು ದಲಿತ ನಾಯಕನೆಂದು ಏಕೆ ಕರೆಯುತ್ತೀರಿ? ‘ದಲಿತ ಮುಖ್ಯಮಂತ್ರಿ’ ಸ್ಥಾನಕ್ಕೆ ಮೀಸಲಾತಿ ಇದೆಯೇ? ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಐವತ್ತೈದು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ಪಕ್ಷದಲ್ಲಿ ಇಷ್ಟು ದೀರ್ಘಕಾಲ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಹೀಗಿದ್ದರೂ ನಾನು ದಲಿತ ಸಿಎಂ ಆಗಬೇಕೇ? ನನ್ನನ್ನು ಆ ರೀತಿ ಎಲ್ಲ ಕರೆಯಬೇಡಿ ಎಂದರು.
ನನ್ನ ಹೆಸರನ್ನು ಉಲ್ಲೇಖಿಸಿ ‘ದಲಿತ ಮುಖ್ಯಮಂತ್ರಿ’ ಆಗಬೇಕೆಂದು ಹೇಳಿದರೆ ನನಗೆ ಅತೀವ ಬೇಸರವಾಗುತ್ತದೆ. ಯಾವುದೇ ಕಾರಣಕ್ಕೂ ನನ್ನನ್ನು ದಲಿತ ಎಂದು ಕರೆಯಬೇಡಿ. ನನ್ನನ್ನು ಒಂದು ಜಾತಿಗೆ ಸೀಮಿತಗೊಳಿಸಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಪರಿಸ್ಥಿತಿಯನ್ನು ಗಮನಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸ್ಥಾನ ಬರಲಿದ್ದು, ಬಿಜೆಪಿಗೆ ಸ್ಪಷ್ಟ ಬಹುಮತ ಸಿಗುವುದಿಲ್ಲ. ಬಿಜೆಪಿ ಸರಕಾರ ಉರುಳಿದರೆ ಆ ಬಳಿಕ ಏನು ಮಾಡಬೇಕೆಂದು ಪಕ್ಷದ ಹೈಕಮಾಂಡ್ ತೀರ್ಮಾನಿಸಲಿದೆ. ಹದಿನೈದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ನುಡಿದರು.