ಹಣ ಹಂಚಿಕೆ ಆರೋಪ: ಇಬ್ಬರು ಜೆಡಿಎಸ್ ಕಾರ್ಯಕರ್ತರ ಬಂಧನ
ಬೆಂಗಳೂರು, ಡಿ.4: ಉಪಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚಿಕೆ ಆರೋಪದಡಿ ಜೆಡಿಎಸ್ ಪಕ್ಷದ ಇಬ್ಬರು ಕಾರ್ಯಕರ್ತರನ್ನು ಇಲ್ಲಿನ ಮಹಾಲಕ್ಷ್ಮೀಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ.
ಮಹಾಲಕ್ಷ್ಮೀಲೌಟ್ ನಿವಾಸಿಗಳಾದ ನಾಗೇಂದ್ರ ಹಾಗೂ ಗಂಗಾಧರ ಬಂಧಿತ ಆರೋಪಿಗಳೆಂದು ತಿಳಿದುಬಂದಿದೆ.
ಉಪಚುನಾವಣೆಯಲ್ಲಿ ಮತದಾರರನ್ನ ಸೆಳೆಯಲು ಕೆಲ ಕಾರ್ಯಕರ್ತರು ಮನೆ ಮನೆಗೆ ತೆರಳಿ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು, ಆರೋಪಿಗಳನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.
ದೂರಿನಲ್ಲಿ ಏನಿದೆ: ಇಲ್ಲಿನ ಮುನೇಶ್ವರ ಬ್ಲಾಕ್ನಲ್ಲಿ ಆರೋಪಿಗಳಾದ ನಾಗೇಂದ್ರ ಮತ್ತು ಗಂಗಾಧರ, ಜೆಡಿಎಸ್ ಪಕ್ಷಕ್ಕೆ ಮತ ನೀಡುವಂತೆ ಕೋರಿ, ಮತದಾರರಿಗೆ ಹಣ ಹಂಚಿಕೆ ಮಾಡಿದ್ದಾರೆಂದು ಸ್ಥಳೀಯ ಚುನಾವಣಾಧಿಕಾರಿಗಳು ದೂರು ನೀಡಿದ್ದರು. ಇದರ ಅನ್ವಯ ಕಾರ್ಯಾಚರಣೆ ನಡೆಸಿ ಆರೋಪಿಗಳ ಬಳಿಯಿದ್ದ 30 ಸಾವಿರ ರೂ. ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story