ರಾಜ್ಯ ಸರಕಾರದ ಹುದ್ದೆಗಳಿಗೆ ಕೇಂದ್ರ ಸರಕಾರದ ಪ್ರವೇಶ ಪರೀಕ್ಷೆಗೆ ಖಂಡನೆ
ಬೆಂಗಳೂರು, ಡಿ.8: ರಾಜ್ಯ ಸರಕಾರಗಳ ’ಬಿ’ ಹಾಗೂ ’ಸಿ’ ವರ್ಗದ ಹುದ್ದೆಗಳಿಗೂ ಕೇಂದ್ರ ಸರಕಾರವೇ ’ಸಾಮಾನ್ಯ ಪ್ರವೇಶ ಪರೀಕ್ಷ ನಡೆಸುವ ಪ್ರಸ್ತಾವನೆಯನ್ನು 'ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ’ ರಾಜ್ಯ ಸರಕಾರಗಳಿಗೆ ಕಳುಹಿಸಿರುವುದು ದೇಶದ ಒಕ್ಕೂಟ ವ್ಯವಸ್ಥೆಗೆ ಅಪಾಯ ತಂದೊಡ್ಡಿದೆ ಎಂದು ಕನ್ನಡ ಗೆಳೆಯರ ಬಳಗ ಆತಂಕ ವ್ಯಕ್ತಪಡಿಸಿದೆ.
ರಾಜ್ಯಗಳ ಅಧಿಕಾರವನ್ನು ಕಿತ್ತುಕೊಳ್ಳುವ, ಸ್ಥಳೀಯರ ಹಕ್ಕನ್ನು ಕಸಿಯುವ ಕೇಂದ್ರ ಸರಕಾರದ ಈ ನಿಲುನಿಂದ ರಾಜ್ಯ ಸರಕಾರದ ಹುದ್ದೆಗಳಿಗೂ ಹೊರ ರಾಜ್ಯದ ಜನ ಬಂದು ಸ್ಥಳೀಯರನ್ನು ಉದ್ಯೋಗ ವಂಚಿತರನ್ನಾಗಿ ಮಾಡುವ ಸಾಧ್ಯತೆಯಿದೆ. ಕನ್ನಡಗರ ಉದ್ಯೋಗದ ಹಕ್ಕನ್ನು ಕಸಿಯುವ ಕೇಂದ್ರ ಸರಕಾದ ಧೋರಣೆಯನ್ನು ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ್ ಖಂಡಿಸಿದ್ದಾರೆ.
ಬ್ಯಾಂಕ್ ನೇಮಕಾತಿಯಲ್ಲಿ ಪ್ರಾದೇಶಿಕ ನೇಮಕಾತಿ ಮಂಡಳಿಗಳನ್ನು ರದ್ದು ಮಾಡಿ, ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆ ಮೂಲಕ ಬ್ಯಾಂಕ್ ನೇಮಕಾತಿ ಆರಂಭಿಸಿದ ಮೇಲೆ ಗುಮಾಸ್ತರ ಹುದ್ದೆಗಳಿಗೂ ಕನ್ನಡ ಬಾರದವರು ಬರುತ್ತಿದ್ದಾರೆ. ಹೀಗಾಗಿ ರಾಜ್ಯ ಸರಕಾರವು ಕೇಂದ್ರ ಸರಕಾರದ ಈ ಆದೇಶವನ್ನು ಒಪ್ಪಬಾರದು ಎಂದು ಪ್ರಕಟನೆಯಲ್ಲಿ ಮನವಿ ಮಾಡಲಾಗಿದೆ.