ಯಡಿಯೂರಪ್ಪ ಜನ್ಮಭೂಮಿಯಲ್ಲಿ ಬಿಜೆಪಿ ಪಾರುಪತ್ಯ ಸ್ಥಾಪಿಸಲಿದೆ: ಶಾಸಕ ನಾರಾಯಣಗೌಡ
ಬೆಂಗಳೂರು, ಡಿ.10: ಕೆ.ಆರ್.ಪೇಟೆಯ ನೂತನ ಶಾಸಕ ನಾರಾಯಣಗೌಡ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಜೆಡಿಎಸ್ನವರು ಚುನಾವಣೆ ಸಂದರ್ಭದಲ್ಲಿ ದೊಡ್ಡ ದೊಡ್ಡ ಆಪಾದನೆಗಳನ್ನು ಮಾಡಿದ್ದರು. ಆ ಎಲ್ಲ ಆಪಾದನೆಗಳನ್ನು ಎದುರಿಸಿ ನಾನು ಗೆದ್ದು ಬಂದಿದ್ದೇನೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಿದೆ. ಮುಂದಿನ ದಿನಗಳಲ್ಲಿ ಇನ್ನೂ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಜನ್ಮಭೂಮಿಯಲ್ಲಿ ಬಿಜೆಪಿ ಪಾರುಪತ್ಯ ಸ್ಥಾಪಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನನ್ನನ್ನು ಸೋಲಿಸಲು ಇನ್ನಿಲ್ಲದ ಕಸರತ್ತು ಮಾಡಿ ಈಗ ಸುಮ್ಮನಾಗಿದ್ದಾರೆ. ಯುದ್ಧ ಮುಗಿದಿದೆ. ಯಾರು ಯಾರಿಗೆ ಟೋಪಿ ಹಾಕಿದರು ಎಂದು ಜನರಿಗೆ ಗೊತ್ತಾಗಿದೆ. ಮುಖ್ಯಮಂತ್ರಿ ಯಾವ ಖಾತೆ ಕೊಟ್ಟರೂ ನಾನು ಸ್ವೀಕರಿಸುತ್ತೇನೆ. ಇಂತಹದೇ ಖಾತೆ ಬೇಕೆಂದು ಕೇಳುವುದಿಲ್ಲ ಎಂದು ನಾರಾಯಣಗೌಡ ಹೇಳಿದರು.