ಅಸಂಘಟಿತ ನೌಕರರ ಸಾಮಾಜಿಕ ಭದ್ರತೆಗೆ ಸಮಗ್ರ ಯೋಜನೆ: ಸಚಿವ ಸುರೇಶ್ ಕುಮಾರ್
ಬೆಂಗಳೂರು, ಡಿ.10: ರಾಜ್ಯದೆಲ್ಲೆಡೆ ಹಂಚಿಹೋಗಿರುವ ಅಸಂಘಟಿತ ವಲಯದ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಸಮಗ್ರ ಯೋಜನೆಯೊಂದನ್ನು ರೂಪಿಸಲು ಇಷ್ಟರಲ್ಲಿಯೇ ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆ ಕರೆಯಲಾಗುವುದು ಎಂದು ಕಾರ್ಮಿಕ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಅಸಂಘಟಿತ ವಲಯದ ಕಾರ್ಮಿಕರ ಸಂಘಟನೆಗಳು ಸಿಐಟಿಯು ನೇತೃತ್ವದಲ್ಲಿ ಡಿ.12ರಂದು ವಿಧಾನಸೌಧ ಚಲೋ ನಡೆಸಲಿರುವ ಹಿನ್ನೆಲೆಯಲ್ಲಿ ಅಸಂಘಟಿತ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಮತ್ತು ಕಾರ್ಮಿಕ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಮಾಲಿಗಳು, ಆಟೋ, ಟ್ಯಾಕ್ಸಿ ಚಾಲಕರು, ಮನೆ ಕೆಲಸಗಾರರು, ಬೀದಿ ಬದಿ ವ್ಯಾಪಾರಿಗಳು, ದ್ವಿಚಕ್ರ ವಾಹನ ಮೆಕಾನಿಕ್ಗಳು, ಟೈಲರ್ಸ್ಗಳು ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿ ತಮ್ಮ ಅಹವಾಲುಗಳನ್ನು ಸಭೆಯ ಮುಂದಿಟ್ಟರು. ಆಟೋ ಚಾಲಕರನ್ನು ರಾಜ್ಯ ಕಾರ್ಮಿಕರ ವಿಮಾ ನಿಗಮದ ವ್ಯಾಪ್ತಿಗೆ ತರಲು ಇರುವ ಮಾಲಕ-ಕಾರ್ಮಿಕ ವ್ಯಾಖ್ಯೆಯನ್ನು ಪುನರ್ ಪರಿಶೀಲಿಸಿ ಆಟೋ ಚಾಲಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.
ಮನೆ ಕೆಲಸಗಾರರು, ಹಮಾಲರು, ಟೈಲರ್ಗಳು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ದೃಷ್ಟಿಯಿಂದ ಈಗಾಗಲೇ ಜಾರಿಯಲ್ಲಿರುವ ಕೇಂದ್ರ, ರಾಜ್ಯ ಸರಕಾರಗಳ ಹಲವಾರು ಯೋಜನೆಗಳಲ್ಲಿನ ನ್ಯೂನತೆಗಳು ಲೋಪದೋಷಗಳನ್ನು ಸರಿಪಡಿಸಿ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಅಸಂಘಟಿತ ವಲಯದ ನೌಕರರು ಹಲವಾರು ಇಲಾಖೆಗಳ ಅಡಿಯಲ್ಲಿ ಹಂಚಿ ಹೋಗಿರುವುದರಿಂದ ಎಲ್ಲ ಇಲಾಖೆಗಳ ಅದರಲ್ಲೂ ವಿಶೇಷವಾಗಿ ಬಿಬಿಎಂಪಿ, ಡಿಎಂಎ, ಸಾರಿಗೆ, ಕೃಷಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಸಹಕಾರ, ಕೃಷಿ ಉತ್ಪನ್ನ ಮಾರುಕಟ್ಟೆ, ಆಹಾರ ಇಲಾಖೆ, ನಗರಾಭಿವೃದ್ಧಿ ಸೇರಿದಂತೆ ಹಲವಾರು ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಎಲ್ಲರ ಸಹಕಾರದೊಂದಿಗೆ ಅಸಂಘಟಿತ ವಲಯದ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಅನುಕೂಲವಾಗುವ ಸಮಗ್ರ ಯೋಜನೆಯೊಂದನ್ನು ಸಿದ್ಧಪಡಿಸಲಾಗುವುದು ಎಂದು ಅವರು ಹೇಳಿದರು.
ಕೆಲವು ಯೋಜನೆಗಳಲ್ಲಿ 40ನೇ ವಯಸ್ಸಿನ ನಂತರದವರು ಸೇರ್ಪಡೆಯಾಗಲು ನಿಯಮಗಳಲ್ಲಿ ಅವಕಾಶವಿಲ್ಲ. ಆದರೆ, ಬಹುತೇಕ ವಲಯಗಳಲ್ಲಿ 40ಕ್ಕಿಂತ ಹೆಚ್ಚಿನ ವಯಸ್ಸಿನವರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅವರನ್ನು ಇಂತಹ ಯೋಜನೆಗಳ ವ್ಯಾಪ್ತಿಗೆ ತರಲು ನಿಯಮಗಳಲ್ಲಿನ ನ್ಯೂನತೆಗಳನ್ನು ಸರಿಪಡಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಅಂಬೇಡ್ಕರ್ ಸಹಾಯ ಹಸ್ತ ಸ್ಮಾರ್ಟ್ ಕಾರ್ಡ್ ವಿತರಣೆಯಲ್ಲಿನ ವಿಳಂಬಕ್ಕೆ ಕಾರಣಗಳನ್ನು ತಿಳಿದುಕೊಂಡ ಸುರೇಶ್ಕುಮಾರ್, ಯೋಜನೆಗಳ ಲಾಭ ಇಂತಹ ವಲಯದ ನೌಕರರಿಗೆ ದೊರೆಯುವುದು ವಿಳಂಬವಾದರೆ ಅವರಿಗೆ ಭದ್ರತೆಯನ್ನೇ ನಿರಾಕರಿಸಿದಂತಾಗುವುದರಿಂದ ಕಾರ್ಡ್ ವಿತರಣೆಯನ್ನು ಚುರುಕುಗೊಳಿಸಲು ಸೂಚಿಸಿದರು.
ಕೇಂದ್ರದ ಪ್ರಧಾನಮಂತ್ರಿ ಮಾನ್ಧನ್ ಯೋಜನೆ ಫಲಾನುಭವಿಗಳೀಗೆ 60 ವರ್ಷದ ನಂತರ 3 ಸಾವಿರ ರೂ.ನಿವೃತ್ತಿ ವೇತನ ಮಾತ್ರ ದೊರೆಯುವುದು, ಇದು ಈಗ ತಾನೇ ಆರಂಭವಾಗಿರುವ ಯೋಜನೆಯಾದ್ದರಿಂದ ಇನ್ನೂ 20 ವರ್ಷಗಳ ನಂತರ ಇದರ ಪ್ರಯೋಜನ ದೊರೆಯುವುದರಿಂದ ಆ ಹೊತ್ತಿಗೆ 3 ಸಾವಿರ ರೂ.ಗಳು ಯಾವುದಕ್ಕೂ ಸಾಲದು ಎಂದು ಅನೇಕ ಕಾರ್ಮಿಕ ಪ್ರತಿನಿಧಿಗಳು ಸಚಿವರ ಗಮನಕ್ಕೆ ತಂದರು. ಈ ಕುರಿತು ಕೇಂದ್ರ ಸರಕಾರದ ಜೊತೆ ಚರ್ಚಿಸಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.
ಪ್ರಧಾನಮಂತ್ರಿ ಸಾಮಾಜಿಕ ಭದ್ರತೆ ಹಾಗೂ ಪ್ರಧಾನಮಂತ್ರಿ ಜೀವನ್ ಜ್ಯೋತಿ ಯೋಜನೆಗಳು ಕಾರ್ಮಿಕ ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾವಣೆಯಾಗಿರುವುದರಿಂದ ಅವುಗಳ ಜಾರಿಯಲ್ಲಿ ತೊಂದರೆಯಾಗಿರುವಂತಹ ದೂರುಗಳ ಹಿನ್ನೆಲೆಯಲ್ಲಿ ಈ ಯೋಜನೆಗಳನ್ನು ಪುನಃ ಕಾರ್ಮಿಕ ಇಲಾಖೆ ವ್ಯಾಪ್ತಿಜಗೆ ತರಲು ಪ್ರಸ್ತಾವನೆ ಸಲ್ಲಿಸುವಂತೆ ಕಾರ್ಮಿಕ ಇಲಾಖೆ ಕಾರ್ಯದರ್ಶಿಗಳಿಗೆ ಸುರೇಶ್ ಕುಮಾರ್ ಸೂಚಿಸಿದರು.
ಸಭೆಯಲ್ಲಿ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಪಿ.ಎಂ.ಮಣಿವಣ್ಣನ್, ಇಲಾಖೆ ಆಯುಕ್ತ ವಿ.ಎಸ್.ಶಾಂತಾರಾಂ, ಜಂಟಿ ಕಾರ್ಯದರ್ಶಿ ಚಿದಾನಂದ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಮಹೇಶ್ ಪತ್ತಾರ್, ಮಹಾಂತೇಶ್, ಬೀದಿ ಬದಿ ಕೆಲಸಗಾರರ ಸಂಘದ ಅಧ್ಯಕ್ಷೆ ಬಸಮ್ಮ, ರಾಜ್ಯ ಮನೆ ಕೆಲಸಗಾರರ ಸಂಘದ ಅಧ್ಯಕ್ಷೆ ಮಂಗಳ ಕುಮಾರಿ, ಎಪಿಎಂಸಿ ಯಾರ್ಡ್ ಮಂಡಿ ಹಮಾಲರ ಸಂಘದ ಅಧ್ಯಕ್ಷ ಕೆ.ಕುಮರೇಶನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.