ಡಿಸೆಂಬರ್ ಅಂತ್ಯದೊಳಗೆ ಕನ್ನಡ ನಾಮಫಲಕ ಕಡ್ಡಾಯಕ್ಕೆ ಕ್ರಮ: ಬಿಬಿಎಂಪಿ ಮೇಯರ್
ಅಧಿಕಾರಿಗಳು-ಜನಪ್ರತಿನಿಧಿಗಳೊಂದಿಗೆ ಸಭೆ
ಬೆಂಗಳೂರು, ಡಿ.10: ಪಾಲಿಕೆ ವ್ಯಾಪ್ತಿಯಲ್ಲಿ ಕನ್ನಡ ನಾಮಫಲಕ ಅಳವಡಿಸದ 27 ಸಾವಿರ ಮಳಿಗೆಗಳು, ಉದ್ದಿಮೆಗಳಿಗೆ ನೋಟಿಸ್ ನೀಡಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಕಡ್ಡಾಯವಾಗಿ ಕನ್ನಡ ನಾಮಫಲಕ ಹಾಕಲೇಬೇಕು. ಈ ಕುರಿತು ಎಲ್ಲ ಜಂಟಿ ಆಯುಕ್ತರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್ ಸೂಚಿಸಿದ್ದಾರೆ.
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಜಾಹೀರಾತು ಬೈಲಾ, ಜಾಹೀರಾತು ಫಲಕಗಳು ಹಾಗೂ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಗೆ ಆದ್ಯತೆ ನೀಡುವ ಕುರಿತು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಬಿಬಿಎಂಪಿಯ ಎಲ್ಲ ವಲಯಗಳಲ್ಲೂ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ.60ರಷ್ಟು ಕನ್ನಡ ಭಾಷೆಯಲ್ಲಿ ಇರಬೇಕು ಎಂಬ ಬಗ್ಗೆಯೂ ಅಧಿಕಾರಿಗಳು ಹೆಚ್ಚು ಜಾಗೃತವಾಗಿ ಕಾರ್ಯನಿರ್ವಹಿಸಬೇಕು. ಅಲ್ಲದೇ, ಎಲ್ಲ ವಲಯಗಳಲ್ಲೂ ಜಾಹೀರಾತು ಫಲಕಗಳನ್ನು ತಕ್ಷಣವೆ ಬುಡಸಮೇತ ತೆರವುಗೊಳಿಸಬೇಕು. ಅಗತ್ಯವಿದ್ದರೆ ಪೊಲೀಸರ ನೆರವು ಪಡೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಗಡುವು ನೀಡಿದ ನಂತರವೂ ಕನ್ನಡ ನಾಮಫಲಕ ಅಳವಡಿಸದಿದ್ದರೆ ಅಂತಹ ಮಳಿಗೆಗಳು, ಉದ್ದಿಮೆಗಳ ವಾಣಿಜ್ಯ ಪರವಾನಿಗೆ ರದ್ದುಪಡಿಸುವುದಲ್ಲದೆ, ನಾವೇ ಸ್ವತಃ ಬೀದಿಗೆ ಇಳಿದು ಮಳಿಗೆಗಳಿಗೆ ಬೀಗ ಜಡಿಯುತ್ತೇವೆ ಎಂದು ತಿಳಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿರುವ ಹೋಡಿರ್ಂಗ್ಸ್, ಪೋಸ್ಟರ್ಸ್, ಮರದ ಮೇಲೆ ಅಳವಡಿಸಿರುವ ಬಿತ್ತಿಪತ್ರ, ಗೋಡೆ ಬರಹಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ನಗರದ ಸೌಂದರ್ಯೀಕರಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ನಗರದಲ್ಲಿ ಹೋಡಿರ್ಂಗ್ಸ್ ಅಳವಡಿಸಿರುವ ಕೆಲ ಮಾಲಕರು ನ್ಯಾಯಾಲಯದಲ್ಲಿ ಸ್ಟೇ ತಂದಿದ್ದಾರೆ. ಈ ಪೈಕಿ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಇತ್ಯರ್ಥ ಮಾಡುವಂತೆ ಕಾನೂನು ಕೋಶ ವಿಭಾಗದ ಮುಖ್ಯಸ್ಥರಿಗೆ ಮೇಯರ್ ಸೂಚನೆ ನೀಡಿದರು.
ಎಫ್ಕೆಸಿಸಿ ಅಧ್ಯಕ್ಷರ ಪತ್ರಕ್ಕೆ ಮೇಯರ್ ಉತ್ತರ: ಎಫ್ಕೆಸಿಸಿಐನ ಅಧ್ಯಕ್ಷರು ಇತ್ತೀಚೆಗೆ ನಾಮಫಲಕದಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆ ಮಾಡುವ ಮೊದಲು ನಗರದ ಸಮಸ್ಯೆ ನಿವಾರಿಸಬೇಕೆಂದು ಬಿಬಿಎಂಪಿಗೆ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮೇಯರ್, ಕನ್ನಡ ನಾಡು, ನುಡಿ, ಭಾಷೆ ಬಗ್ಗೆ ಗೌರವ ಇಲ್ಲದವರ ಜತೆಗೆ ನಾವು ಯಾವುದೇ ಸಂಬಂಧ ಇಟ್ಟುಕೊಳ್ಳುವುದಿಲ್ಲ. ನಮ್ಮ ಕೆಲಸ ನಮಗೆ ಗೊತ್ತಿದೆ. ಮೊದಲು ನಿಮ್ಮ ಕೆಲಸ ಏನೆಂದು ತಿಳಿದುಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.
ಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್, ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್, ಜೆಡಿಎಸ್ ಪಕ್ಷದ ನಾಯಕಿ ನೇತ್ರಾ ನಾರಾಯಣ್, ಕಾನೂನು ಕೋಶ ವಿಭಾಗದ ಮುಖ್ಯಸ್ಥ ದೇಶಪಾಂಡೆ, ಜಂಟಿ ಆಯುಕ್ತ ವೆಂಕಟೇಶ್, ವಲಯ ಜಂಟಿ ಆಯುಕ್ತ ಬಾಲಶೇಖರ್, ರಾಮಕೃಷ್ಣ, ವೆಂಕಟಾಚಲಪತಿ, ವೀರಭದ್ರಸ್ವಾಮಿ, ಅಶೋಕ್ ಉಪಸ್ಥಿತರಿದ್ದರು.