ಬಿಜೆಪಿ ಸಂಸದ ಆಸ್ತಿ ವಿವರ ಮುಚ್ಚಿಟ್ಟ ಆರೋಪ: ಬಹುಕೋಟಿ ಮೌಲ್ಯದ ಜಮೀನಿನ ಬಗ್ಗೆ ತನಿಖೆಗೆ ಹೈಕೋರ್ಟ್ ತಡೆ
ಬೆಂಗಳೂರು, ಡಿ.10: ಬೆಂಗಳೂರು ಕೇಂದ್ರ ಕ್ಷೇತ್ರದ ಬಿಜೆಪಿ ಸಂಸದ ಪಿ.ಸಿ.ಮೋಹನ್ ದೇವನಹಳ್ಳಿ ಬಳಿ ಬಹುಕೋಟಿ ಮೌಲ್ಯದ 42 ಎಕರೆ ಜಮೀನು ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಜನಪ್ರತಿನಿಧಿಗಳ ಕೋರ್ಟ್ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
ತನಿಖೆ ರದ್ದು ಕೋರಿ ಪಿ.ಸಿ.ಮೋಹನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠವು ತನಿಖೆಗೆ ತಡೆ ನೀಡಿತು. ದೇವನಹಳ್ಳಿ ಬಳಿ 42 ಎಕರೆ ಜಮೀನನ್ನು ಖರೀದಿಸಿದ್ದರೂ ಲೋಕಸಭಾ ಚುನಾವಣೆ ವೇಳೆ ಚುನಾವಣೆ ಆಯೋಗಕ್ಕೆ ಜಮೀನು ಖರೀದಿ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದು ಆನಂದ್ ಎಂಬುವವರು ಕ್ರಿಮಿನಲ್ ಕೇಸ್ ದಾಖಲಿಸಿದ್ದರು.
ಈ ದೂರಿನ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ಕೋರ್ಟ್ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಗೆ ತನಿಖೆ ನಡೆಸಲು ನಿರ್ದೇಶಿಸಿತ್ತು. ಈ ನಿರ್ದೇಶನವನ್ನು ಪ್ರಶ್ನಿಸಿ ಪಿ.ಸಿ.ಮೋಹನ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಪೀಠವು ತನಿಖೆಗೆ ತಡೆ ನೀಡಿ, ದಕ್ಷಿಣ ವಿಭಾಗದ ಡಿಸಿಪಿ, ಅರ್ಜಿದಾರ ಟಿ.ಆರ್.ಆನಂದ್ಗೆ ನೋಟಿಸ್ ಜಾರಿಗೊಳಿಸಿದೆ.
2014ರ ಲೋಕಸಭಾ ಚುನಾವಣೆ ವೇಳೆ ಸಲ್ಲಿಸಿದ್ದ ಅಫಿಡವಿಟ್ನಲ್ಲಿ ಪಿ.ಸಿ.ರಿಯಾಲ್ಟಿ ಸಂಸ್ಥೆಯಲ್ಲಿ 14.65 ಕೋಟಿ ಹೂಡಿರುವುದಾಗಿ ಮೋಹನ್ ತೋರಿಸಿದ್ದರು. ಆದರೆ, ದೇವನಹಳ್ಳಿ ಆಸ್ತಿಗೆ ಸಂಬಂಧಿಸಿದಂತೆ ಆಸ್ತಿ ಮತ್ತು ಋಣಭಾರದಲ್ಲಿ ವಿವರವನ್ನು ಉಲ್ಲೇಖಿಸಿರಲಿಲ್ಲ. 2019ರ ಚುನಾವಣೆ ವೇಳೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಇದೇ ಸಂಸ್ಥೆಯಿಂದ ನನಗೆ 12.63 ಲಕ್ಷ, ಪತ್ನಿ ಶೈಲಾ ಅವರಿಗೆ 8.75 ಕೋಟಿ ಬರಬೇಕಿದೆ ಎಂದು ಮೋಹನ್ ಹೇಳಿಕೊಂಡಿದ್ದರು. 42 ಎಕರೆಯಲ್ಲಿ 4 ಎಕರೆ 4 ಗುಂಟೆ ಶೃಂಗೇರಿ ಶಿವಗಂಗೆ ಪೀಠದ ಆಸ್ತಿಯೂ ಸೇರಿದೆ. ಅಕ್ರಮವಾಗಿ ಮಾರಾಟ ಮಾಡಿದ್ದ ಮಠದ ಜಾಗವನ್ನು ಮೋಹನ ಖರೀದಿಸಿದ್ದಾರೆ. ಹೀಗಾಗಿಯೇ ವಿವರ ಮುಚ್ಚಿಟ್ಟಿದ್ದಾರೆ ಎಂದು ಆನಂದ್ ಆರೋಪಿಸಿದ್ದರು.