ಭಾರತೀಯರಾದ ನಾವು ದಾಖಲೆಗಳನ್ನು ನೀಡಿ ಪೌರತ್ವ ಸಾಬೀತುಪಡಿಸಲ್ಲ: ಮಾಜಿ ಸಚಿವ ಝಮೀರ್ ಅಹ್ಮದ್
ಸಿಎಬಿ, ಎನ್ಆರ್ಸಿ ವಿರೋಧಿಸಿ ಪ್ರತಿಭಟನೆ
ಬೆಂಗಳೂರು, ಡಿ.13: ಭಾರತೀಯರಾದ ನಾವು ಯಾವುದೇ ರೀತಿಯ ದಾಖಲೆಗಳನ್ನು ಸಾಬೀತುಪಡಿಸುವ ಅಗತ್ಯ ಇಲ್ಲ ಎಂದು ಮಾಜಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಹೇಳಿದರು.
ಶುಕ್ರವಾರ ನಗರದ ಗೋರಿಪಾಳ್ಯ ಮುಖ್ಯರಸ್ತೆಯಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಕೇಂದ್ರ ಸರಕಾರ ಜಾರಿಗೆ ಮುಂದಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಬಿ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ವಿರೋಧಿಸಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
1947ರ ಸ್ವಾತಂತ್ರ ಬಳಿಕ, ಭಾರತ ಬೇಡ ಎನ್ನುವವರು ಮುಹಮ್ಮದ್ ಅಲಿ ಜಿನ್ನಾ ಸಂಸ್ಥಾಪಿಸಿದ ಪಾಕಿಸ್ತಾನಕ್ಕೆ ಹೋಗಿದ್ದಾರೆ. ಹಿಂದೂಸ್ತಾನದ ನೆಲದ ಮೇಲೆ ಪ್ರೀತಿಯುಳ್ಳವರು ಇಲ್ಲೇ ನೆಲೆಸಿದರು. ಹಾಗಾಗಿ, ಭಾರತದಲ್ಲಿರುವ ನಾವೆಲ್ಲರೂ, ಯಾವುದೇ ಆಧಾರಗಳಿಂದ ನಾಗರಿಕತೆ ಸಾಬೀತುಪಡಿಸುವಂತಿಲ್ಲ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಜತೆಗೂಡಿ ನೂರಾರು ಕಾನೂನುಗಳನ್ನು ಜಾರಿ ಮಾಡಿದರೂ, ದೇಶದ ಮೇಲೆ ಪ್ರೀತಿ, ವಿಶ್ವಾಸವುಳ್ಳವರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಈ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವಂತಿಲ್ಲ ಎಂದು ಝಮೀರ್ ನುಡಿದರು.