ಮಾರ್ಷಲ್ಗಳಿಂದ ದೌರ್ಜನ್ಯ ಆರೋಪ: ಬಿಬಿಎಂಪಿ ಪೌರಕಾರ್ಮಿಕರಿಂದ ಪ್ರತಿಭಟನೆ
ಬೆಂಗಳೂರು, ಡಿ.13: ಬಿಬಿಎಂಪಿ ನೇಮಿಸಿರುವ ಮಾರ್ಷಲ್ಗಳಿಂದ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಬಿಬಿಎಂಪಿ ಪೌರಕಾರ್ಮಿಕರು ಬೃಹತ್ ಪ್ರತಿಭಟನೆ ನಡೆಸಿದರು.
ಶುಕ್ರವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗ ಜಮಾಯಿಸಿದ ಪೌರ ಕಾರ್ಮಿಕರು, ಜೆಸಿ ರಸ್ತೆಯಲ್ಲಿ ಪೌರಕಾರ್ಮಿಕ ರಮೇಶ್ ಎಂಬುವರ ಮೇಲೆ ಮಾರ್ಷಲ್ ಗಳು ಹಲ್ಲೆ ನಡೆಸಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ನಗರದೆಲ್ಲೆಡೆ ಕಂಡ ಕಂಡಲ್ಲಿ ಕಸ ಎಸೆಯುವವರ ಮೇಲೆ ಹದ್ದಿನ ಕಣ್ಣಿಡಲು ಬಿಬಿಎಂಪಿ ಸಾವಿರಾರು ಹಣ ಖರ್ಚು ಮಾಡಿ ಮಾರ್ಷಲ್ಗಳನ್ನು ನೇಮಕ ಮಾಡಿದೆ. ಆದರೆ, ಈ ಮಾರ್ಷಲ್ಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವ ಹಿಸುವುದನ್ನು ಬಿಟ್ಟು ಲಂಚ ನೀಡುವಂತೆ ಕಿರುಕುಳ ನೀಡುತ್ತಾರೆ ಎಂದು ಆರೋಪ ಮಾಡಿದರು.
ಅಂಗಡಿಗಳಲ್ಲಿ ಪ್ಲಾಸ್ಟಿಕ್ ಮಾರುತ್ತಿದ್ದಾರೆಂದು ಕಮಿಷನ್ ಪಡೆಯುತ್ತಾರೆ. ಜನರಲ್ಲಿ ಅರಿವು ಮೂಡಿಸುವುದನ್ನು ಬಿಟ್ಟು ಹಣದ ಆಸೆಗೆ ಒಳಗಾಗಿದ್ದಾರೆ. ಇಂತಹ ಮಾರ್ಷಲ್ ಗಳ ಅವಶ್ಯಕತೆ ಇದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದ ಪೌರ ಕಾರ್ಮಿಕರು, ಉದ್ದೇಶಪೂರ್ವಕವಾಗಿ ಪೌರ ಕಾರ್ಮಿಕ ರಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ತಪ್ಪಿತಸ್ಥರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.