ಸರೋಜಿನಿ ಮಹಿಷಿ ವರದಿ ಜಾರಿಗೆ ಅಗತ್ಯ ಕ್ರಮ: ಡಿಸಿಎಂ ಅಶ್ವಥ್ ನಾರಾಯಣ
ಬೆಂಗಳೂರು, ಡಿ.16: ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಒದಗಿಸುವ ಸಂಬಂಧ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ನಮ್ಮ ಸರಕಾರ ಎಲ್ಲ ಅಗತ್ಯ ಕ್ರಮ ಕೈಗೊಂಡು ಶೀಘ್ರದಲ್ಲೇ ಪರಿಣಾಮಕಾರಿ ಪರಿಹಾರ ಒದಗಿಸಲಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಹೇಳಿದ್ದಾರೆ.
ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಕನ್ನಡ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ಆನಂದ್ರಾವ್ ವೃತ್ತದಲ್ಲಿರುವ ಗಾಂಧಿ ಪ್ರತಿಮೆ ಬಳಿ ನಡೆಸುತ್ತಿರುವ ಸತ್ಯಾಗ್ರಹದ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಅವರ ಅಹವಾಲು ಸ್ವೀಕರಿಸಿದ ಬಳಿಕ ಅಶ್ವಥ್ ನಾರಾಯಣ ಮಾತನಾಡಿದರು.
ಸರೋಜಿನಿ ಮಹಿಷಿ ಆಯೋಗದ ವರದಿಯಂತೆ ಸಿ ಮತ್ತು ಡಿ ದರ್ಜೆಯಲ್ಲಿ ಕನ್ನಡಿಗರಿಗೆ ಶೇ.80ರಷ್ಟು ಉದ್ಯೋಗ ಮೀಸಲು ಕಡ್ಡಾಯ. ಆದರೆ, ಎ ಮತ್ತು ಬಿ ದರ್ಜೆಯಲ್ಲಿ ಇದನ್ನು ಕಡ್ಡಾಯ ಮಾಡುವುದು ಸವಾಲಿನ ವಿಷಯ. ಆದರೆ, ನಾಡಿನ ಜನರಿಗೆ ಉದ್ಯೋಗ ದೊರೆತು, ಬದುಕು ಕಟ್ಟಿಕೊಳ್ಳಲೇಬೇಕು. ಪ್ರತಿ ಕುಟುಂಬಕ್ಕೆ ಉದ್ಯೋಗ ನೀಡುವುದು ನಮ್ಮ ಸರಕಾರದ ಜವಾಬ್ದಾರಿಯಾಗಿದ್ದು ಇದಕ್ಕೆ ನಾವು ಬದ್ಧ ಎಂದು ಅವರು ಹೇಳಿದರು.
ಬದಲಾಗುತ್ತಿರುವ ವಾತಾವರಣದಲ್ಲಿ ನಾಡಿನ ಆರ್ಥಿಕತೆಗೆ ಶಕ್ತಿ ತುಂಬಿ, ಉದ್ಯೋಗ ಸೃಷ್ಟಿ ಮಾಡುವುದು ಸರಕಾರದ ಉದ್ದೇಶ. ವ್ಯಾಪಾರ, ವ್ಯವಹಾರದಲ್ಲೂ ಸಾಕಷ್ಟು ಬದಲಾವಣೆಗಳು ಆಗಿವೆ. ಜಾಗತೀಕರಣ ಹಾಗೂ ಆರ್ಥಿಕ ಹಿಂಜರಿತ ಮುಂತಾದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಪರಿಹಾರ ಕಂಡುಕೊಳ್ಳಲು ಸಜ್ಜಾಗಿದ್ದೇವೆ ಎಂದು ಅಶ್ವಥ್ ನಾರಾಯಣ ತಿಳಿಸಿದರು.
ಪರಿಹಾರ ಕ್ರಮ: ಉದ್ಯೋಗಾಕಾಂಕ್ಷಿಗಳ ಕೌಶಲ್ಯ ಹೆಚ್ಚಿಸಲು ಎಲ್ಲ ಏಜೆನ್ಸಿಗಳನ್ನು ಒಂದೇ ವೇದಿಕೆಗೆ ತಂದು ಏಕ ಗವಾಕ್ಷಿ ಯೋಜನೆಯಡಿ ಉದ್ಯೋಗ ಕೌಶಲ್ಯ ಕಲಿಸಲು ಸರಕಾರ ಕಾರ್ಯ ಪ್ರವೃತ್ತವಾಗಿದೆ. ಈ ಮೂಲಕ ಉದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ಹೇಳಿದರು.
ಇದೇ ದಾರಿಯಲ್ಲಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಅವರ ಮುಂದಿನ ಉದ್ಯೋಗಕ್ಕೆ ಪೂರಕವಾದ ಕೌಶಲ್ಯ ಕಲಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಎಲ್ಲಿ, ಯಾವ ರೀತಿಯ ಉದ್ಯೋಗ ಇದೆ ಎಂಬುದೇ ಗೊತ್ತಾಗುತ್ತಿರಲಿಲ್ಲ. ಹಾಗಾಗಿ ಈ ವೇದಿಕೆಯನ್ನು ತರಲಾಗಿದೆ ಎಂದು ಅಶ್ವಥ್ ನಾರಾಯಣ ತಿಳಿಸಿದರು.
ಉದ್ಯೋಗಕ್ಕೆ ಬೇಕಿರುವ ಎಲ್ಲ ಕೌಶಲ್ಯವನ್ನು ಕಲಿಕೆ ವೇಳೆಯಲ್ಲೆ ಕಲಿಸುವ ನಿಟ್ಟಿನಲ್ಲಿ ಪ್ರಯತ್ನಗಳಾಗುತ್ತಿವೆ. ವಿದ್ಯಾಭ್ಯಾಸದ ವೇಳೆಯಲ್ಲೆ ಪ್ರಾಜೆಕ್ಟ್, ಇಂಟರ್ನ್ ಶಿಪ್, ಅಪ್ರೆಂಟಿಶಿಪ್ ಮಾಡಲು ಅವಕಾಶ ಮಾಡಿಕೊಲಾಗುತ್ತದೆ. ಈ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಕಂಪೆನಿಗಳ ಜತೆ ಸಂಬಂಧ ಬೆಸೆಯಲಾಗುತ್ತಿದೆ. ಓದು ಮುಗಿದ ನಂತರ ಕೆಲಸ ಹುಡುಕುವ ಬದಲಿಗೆ ಕಲಿಕೆ ವೇಳೆಯಲ್ಲಿ ಉದ್ಯೋಗಾವಕಾಶ ಪಡೆಯಬಹುದು ಎಂದು ಅವರು ವಿವರಿಸಿದರು.
ಎಲ್ಲಿಂದಲೋ ಬಂದವರು ಇಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಇಲ್ಲಿಯವರು ಇಲ್ಲಿನ ಕಂಪೆನಿಗಳ ಜತೆ ಸಂಪರ್ಕ ಬೆಳೆಸಿಕೊಳ್ಳಲು ಪೂರಕ ಕ್ರಮಗಳನ್ನು ಕೈಗೊಂಡಿದ್ದೇವೆ. ಸಂಪರ್ಕದ ಕೊರತೆಯ ಸಣ್ಣ ಸಮಸ್ಯೆಯೆ ದೊಡ್ಡ ಸಮಸ್ಯೆ ಆಗಿ ಕಾಡುತ್ತಿತ್ತು. ಈಗ ಅದಕ್ಕೆ ಪರಿಹಾರ ಕಂಡುಕೊಳ್ಳಲಾಗಿದೆ. ಓದುವ ಸಂದರ್ಭದಲ್ಲೆ ಉದ್ಯೋಗಾವಕಾಶದ ಮಾಹಿತಿ ಮತ್ತು ಅಗತ್ಯ ತರಬೇತಿ ಮತ್ತು ವೃತ್ತಿಪರ ಅವಕಾಶ ಸೃಷ್ಟಿಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಅಶ್ವಥ್ ನಾರಾಯಣ ತಿಳಿಸಿದರು.