ಕುಮಾರಸ್ವಾಮಿಗೆ ಕೊರಿಯರ್ ಮೂಲಕ ರೈತ ನೀಡಿದ 'ವಿಶೇಷ ಉಡುಗೊರೆ' ಏನು ಗೊತ್ತಾ ?
ಸಾಲಮನ್ನಾಗೆ ಕೃತಜ್ಞತೆ
ಬೆಂಗಳೂರು, ಡಿ. 18: ರಾಜ್ಯದಲ್ಲಿ ರೈತರ ಸಾಲಮನ್ನಾ ಮಾಡಿದ ಕುಮಾರಸ್ವಾಮಿ ಅವರಿಗೆ ಧಾರವಾಡ ಜಿಲ್ಲೆ ಹುಬ್ಬಳಿ ತಾಲೂಕಿನ ಕಿರೇಸೂರ ಗ್ರಾಮದ ಗೋವಿಂದಪ್ಪ ಶ್ರೀಹರಿ ರೈತ ಕೊರಿಯರ್ ಮೂಲಕ ವಿಶೇಷ ಉಡುಗೊರೆಯೊಂದನ್ನು ರವಾನಿಸಿದ್ದಾರೆ.
ಒಂದು ದೊಡ್ಡ ಪೆಟ್ಟಿಗೆಯಲ್ಲಿ ಖಡಕ್ ಜೋಳದ ರೊಟ್ಟಿ, ಶೇಂಗಾ ಚೆಟ್ನಿಪುಡಿ, ವಿಶೇಷ ಪಲ್ಯವನ್ನು ಸಿದ್ದಪಡಿಸಿ ಕೊರಿಯರ್ ಮೂಲಕ ಕುಮಾರಸ್ವಾಮಿಗೆ ರವಾನಿಸಿರುವ ರೈತ ಗೋವಿಂದಪ್ಪ ಅವರು, ಇದೇ ವೇಳೆ ಸಾಲಮನ್ನಾಗೆ ಕೃತಜ್ಞತೆ ಸಲ್ಲಿಸಿ ಪತ್ರವನ್ನು ಬರೆದಿದ್ದಾರೆ.
ಸಾಲಬಾಧೆಯಿಂದ ಆತ್ಮಹತ್ಯೆ ಹಾದಿ ಹಿಡಿದಿದ್ದ ರೈತ ಗೋವಿಂದಪ್ಪರಿಗೆ ಆ ವೇಳೆ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಖುದ್ದು ಕರೆ ಮಾಡಿ ‘ನಿಮ್ಮ ಸಾಲಮನ್ನಾ ಆಗಲಿದೆ, ಯಾವುದೇ ಕಾರಣಕ್ಕೂ ಆತ್ಮಹತ್ಯೆಯ ಹಾದಿಯನ್ನು ಹಿಡಿಯಬೇಡಿ’ ಎಂದು ಸಾಂತ್ವನ ಹೇಳಿದ್ದರು.
ಹೀಗಾಗಿ ರೈತ ಗೋವಿಂದಪ್ಪ ತನ್ನ ಜಮೀನಿನಲ್ಲಿ ಬೆಳೆದ ಜೋಳದಿಂದ ಖಡಕ್ ರೊಟ್ಟಿ ಮತ್ತು ಶೇಂಗಾ ಚೆಟ್ಟಿಪುಡಿ ಸಿದ್ದಪಡಿಸಿ ಕುಮಾರಸ್ವಾಮಿಯವರಿಗೆ ಕಳುಹಿಸುವ ಮೂಲಕ ಎಚ್ಡಿಕೆ ನಿವಾಸದ ಸಿಬ್ಬಂದಿ ಹಾಗೂ ಸಾರ್ವಜನಿಕರ ಬಾಯಲ್ಲಿ ನಿರೂರಿಸುವ ಉಡುಗೊರೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ.