ಕೆಎಸ್ಸಾರ್ಟಿಸಿ ಏಳ್ಗೆ ನೂತನ ವರ್ಷದ ಸಂಕಲ್ಪವಾಗಲಿ: ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ
ಬೆಂಗಳೂರು, ಜ. 1: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ಏಳ್ಗೆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲು ನಿಗಮದ ಪ್ರತಿಯೊಬ್ಬರು 2020ನೆ ವರ್ಷದಲ್ಲಿ ಸಂಕಲ್ಪ ಮಾಡಬೇಕು ಎಂದು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ನೂತನ ವರ್ಷಕ್ಕೆ ಸಂಸ್ಥೆ ಅಧಿಕಾರಿ ಮತ್ತು ಸಿಬ್ಬಂದಿಗೆ ಶುಭ ಕೋರಿದ್ದಾರೆ.
ಬುಧವಾರ ಸಂಸ್ಥೆ ಕೇಂದ್ರ ಕಚೇರಿಯಲ್ಲಿ ಏರ್ಪಡಿಸಿದ್ದ ನೂತನ ವರ್ಷದ ಸರಳ ಸಮಾರಂಭದಲ್ಲಿ ಮಾತನಾಡಿದ ಅವರು, ನಾವೆಲ್ಲರೂ ಒಂದು ಕುಟುಂಬವಾಗಿ, ನಿಗಮದ ಶ್ರೇಯೋಭಿವೃದ್ಧಿಗೆ ದಕ್ಷತೆಯಿಂದ ದುಡಿದು, ಸಾರ್ವಜನಿಕ ಪ್ರಯಾಣಿಕರಿಗೆ ಅತ್ಯುತ್ತಮ ಸೇವೆಯನ್ನು ಕಲ್ಪಿಸುವ ಆಶಯ ನಮ್ಮದಾಗಿರಲಿ ಎಂದು ಹಾರೈಸಿದರು.
ಹಲವು ಪೈಪೋಟಿ/ತೊಡಕುಗಳ ನಡುವೆಯೂ ನಿಗಮದ ಏಳ್ಗೆಗೆ ಶ್ರಮಿಸಬೇಕು ಎಂದರು. ಇದೇ ವೇಳೆ ಕೇಂದ್ರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳು ಹಾಗೂ ಅವರ ಮಕ್ಕಳಿಗೆ ಈ ಹಿಂದೆ ಏರ್ಪಡಿಸಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ, ಹಿರಿಯ ಅಧಿಕಾರಿಗಳಾದ ಅನುಪಮ್ ಅಗರ್ವಾಲ್, ಕವಿತಾ ಎಸ್.ಮನ್ನಿಕೇರಿ ಸೇರಿದಂತೆ ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.