ಯುವತಿ ಮೇಲೆ ಅತ್ಯಾಚಾರ, ಮತಾಂತರ ಆರೋಪ: ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ ಸಂಸದೆ ಶೋಭಾ
ಸಂಸದೆ ಶೋಭಾ ಕರಂದ್ಲಾಜೆ
ಬೆಂಗಳೂರು, ಜ.5: ಕಾಸರಗೋಡು ಮೂಲದ ಯುವತಿಗೆ ಅತ್ಯಾಚಾರದ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಸಿ ಮತಾಂತರಕ್ಕೆ ಬಲವಂತ ಮಾಡಿದ ಆರೋಪ ಸಂಬಂಧ ನಗರ ಪೊಲೀಸರಿಗೆ ಸಂಸದೆ ಶೋಭಾ ಕರಂದ್ಲಾಜೆ ದೂರು ಸಲ್ಲಿಸಿದ್ದಾರೆ.
ರವಿವಾರ ಇಲ್ಲಿನ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದ ಅವರು, ಆಯುಕ್ತ ಭಾಸ್ಕರ್ ರಾವ್ ಅವರಿಗೆ ದೂರು ಸಲ್ಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದರು.
ಸಂತ್ರಸ್ಥ ಯುವತಿಗೆ ನಶೆಯ ಪಾನೀಯ ನೀಡಿದ ದುಷ್ಕರ್ಮಿಗಳು ಮಂಗಳೂರು ಮತ್ತು ಬೆಂಗಳೂರಿನ ಹೋಟೆಲ್ಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ. ಅತ್ಯಾಚಾರದ ದೃಶ್ಯಗಳನ್ನು ಸೆರೆ ಹಿಡಿದು ಮತಾಂತರಕ್ಕೆ ಬಲವಂತ ಮಾಡಿದ್ದಾರೆ. ತಂದೆಯನ್ನು ಬಿಟ್ಟು ತಂಗಿ ಮತ್ತು ತಾಯಿಯೊಂದಿಗೆ ಮತಾಂತರವಾಗುವಂತೆ ಕಾಸರಗೋಡು ಮೂಲದ ಯುವತಿಗೆ ಬಲವಂತ ಮಾಡಲಾಗಿದೆ ಎಂದು ಶೋಭಾ ಆರೋಪ ಮಾಡಿದರು.
ಲೈಂಗಿಕ ಕಿರುಕುಳ ನೀಡಿರುವ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಅವರು ಒತ್ತಾಯ ಮಾಡಿದ್ದಾರೆ.