ವಿದ್ಯುತ್ ನಿಗಮಗಳಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನೇರ ನೇಮಕಾತಿ ಇಲ್ಲ: ಬಿಎಸ್ವೈ
ಬೆಂಗಳೂರು, ಜ. 6: ವಿದ್ಯುತ್ ನಿಗಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 2 ಸಾವಿರ ಇಂಜಿನಿಯರುಗಳ ಭವಿಷ್ಯದ ದೃಷ್ಟಿಯಿಂದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರುಗಳ ಹುದ್ದೆಗೆ ನೇರ ನೇಮಕಾತಿಯನ್ನು ರದ್ದುಪಡಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಸೋಮವಾರ ನಗರದ ಕರ್ನಾಟಕ ವಿದ್ಯುತ್ ಶಕ್ತಿ ಮಂಡಳಿ ಇಂಜಿನಿಯರುಗಳ ಸಂಘದ ವತಿಯಿಂದ ಆಯೋಜಿಸಲಾದ ಸುವರ್ಣ ಮಹೋತ್ಸವ ಸಂಸ್ಕರಣಾ ಉಪನ್ಯಾಸ ಹಾಗೂ 2020ರ ತಾಂತ್ರಿಕ ದಿನಚರಿ ಮತ್ತು ಕವಿಪ್ರನಿನಿಯ 2020ರ ಕ್ಯಾಲೆಂಡ್ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಜಿನಿಯರುಗಳ ಭವಿಷ್ಯದ ದೃಷಿಯಿಂದ ಸಹಾಯಕ ಕಾರ್ಯನಿರ್ವಹಕ ಇಂಜಿನಿಯರುಗಳ ಹುದ್ದೆಗೆ ನೇರ ನೇಮಕಾತಿಯನ್ನು ರದ್ದುಪಡಿಸಿ, 9ರಿಂದ 13ವರ್ಷಗಳ ಕಾಲ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಸಹಾಯಕ ಇಂಜಿನಿಯರ್ಗಳಿಗೆ ಪದೋನ್ನತಿ ನೀಡಲು ಮಂಡಳಿ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಈ ನಿರ್ಧಾರವನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲಾಗುವುದು ಎಂದರು.
ಇದರಿಂದ ರಾಜ್ಯದ ಜನತೆಗೆ ಹಾಗೂ ನಿಗಮಗಳಿಗೆ ಅನುಕೂಲ ಆಗುವುದರ ಜೊತೆಗೆ ರಾಜ್ಯಾದ್ಯಂತ ಏಕರೂಪದ ಕಾಯಿದೆಯನ್ನು ಕಾನೂನು ಮತ್ತು ನೀತಿ ನಿಯಮಗಳನ್ನು ಜಾರಿಗೊಳಿಸಲು ಸಾಧ್ಯ. ರಾಜ್ಯದ ಜನತೆಗೆ ಕಡಿಮೆ ದರದಲ್ಲಿ ವಿದ್ಯುತ್ ವಿತರಿಸಲು ಸಾಧ್ಯ ಎಂದರು.
ಶಿಕ್ಷಣ ತಜ್ಞ ಡಾ.ಗುರುರಾಜ್ ಕರಜಗಿ, ಸುವರ್ಣ ಮಹೋತ್ಸವ ಸಂಸ್ಕರಣಾ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಾ. ಎನ್.ಮಂಜುಳಾ, ಮಂಡಳಿ ಇಂಜಿನಿಯರುಗಳ ಸಂಘದ ಅಧ್ಯಕ್ಷ ಶಿವಪ್ರಕಾಶ್ ಸೇರಿ ಪದಾಧಿಕಾರಿಗಳು ಹಾಜರಿದ್ದರು.