ಸೇವಾಲಾಲ್-ಮರಿಯಮ್ಮ ದೇವಸ್ಥಾನಕ್ಕೆ 50ಲಕ್ಷ ರೂ.ನೆರವು: ಮುಖ್ಯಮಂತ್ರಿ ಯಡಿಯೂರಪ್ಪ
ಬೆಂಗಳೂರು, ಜ. 7: ಕಲಬುರ್ಗಿ ವಿಮಾನ ನಿಲ್ದಾಣಕ್ಕಾಗಿ ತೆರವುಗೊಳಿಸಿದ್ದ ಸೇವಾಲಾಲ್ ಮತ್ತು ಮರಿಯಮ್ಮ ದೇವಿ ಮಂದಿರ ನಿರ್ಮಾಣಕ್ಕೆ ಪರ್ಯಾಯ ಸ್ಥಳ, 50 ಲಕ್ಷ ರೂ. ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಮಂಗಳವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವ ಪ್ರಭು ಚೌವ್ಹಾಣ್ ನೇತೃತ್ವದ ಬಂಜಾರ ಸಮುದಾಯದ ಮುಖಂಡರ ನಿಯೋಗದ ಮನವಿಗೆ ಸ್ಪಂದಿಸಿ ಬಿಎಸ್ವೈ, ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಜಮೀನಿಗೆ ತೆರಳುವ ರಸ್ತೆಗಳನ್ನು ನಿರ್ಮಿಸಿ ಕೊಡಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಪರಿಶೀಲನೆ: ಕಲಬುರ್ಗಿಯ ತಹಶೀಲ್ದಾರ ಮತ್ತು ಕಿರಿಯ ಅಭಿಯಂತರರನ್ನು ಅಮಾನತ್ತು ಸಂಬಂಧ ಪರೀಶಿಲನೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು. ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡವರಲ್ಲಿ ಶೇ.90ರಷ್ಟು ಬಂಜಾರ ಸಮುದಾಯದವರು.
ಭೂ ಸ್ವಾಧೀನದ ವೇಳೆಯೆ ಸೇವಾಲಾಲ್ ಮತ್ತು ಮರಿಯಮ್ಮ ದೇವಿ ದೇವಸ್ಥಾನ ನೆಲಸಮ ಮಾಡದಂತೆ ಷರತ್ತು ವಿಧಿಸಿ ನಿಲ್ದಾಣ ನಿರ್ಮಾಣಕ್ಕೆ ಭೂಮಿ ನೀಡಲಾಗಿತ್ತು. ಆದರೆ, ವಿಮಾನ ನಿಲ್ದಾಣ ಉದ್ಘಾಟನೆಯ ಮುನ್ನಾದಿನ ದೇವಸ್ಥಾನ ನೆಲಸಮ ಮಾಡಿದ್ದು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಿಯೋಗ ಆಗ್ರಹಿಸಿತು.
ಸಂಸದ ಉಮೇಶ್ ಜಾಧವ್, ಬಂಜಾರ ಸೇವಾ ಸಂಘದ ಅಧ್ಯಕ್ಷ ಶಂಕರ್ ಪವಾರ್, ಸಮುದಾಯದ ಗುರು ಪರ್ವತಲಿಂಗ ಪರಮೇಶ್ವರ್ ಮಹರಾಜ್ ಸೇರಿ ಇನ್ನಿತರರು ಹಾಜರಿದ್ದರು.