ಜ.19 ರಿಂದ ಪೆಟ್ರೋಕೆಮಿಕಲ್ ಸಮ್ಮೇಳನ
ಬೆಂಗಳೂರು, ಜ.17: ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ವತಿಯಿಂದ ರಿಫ್ಯೆನಿಂಗ್ ಅಂಡ್ ಪೆಟ್ರೋಕೆಮಿಕಲ್ ಸಮ್ಮೇಳನವನ್ನು ಜ.19 ರಿಂದ 21 ರವರೆಗೆ ಬೆಂಗಳೂರು ಅಂತರ್ರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕಮ್ಯುನಿಕೇಷನ್ನ ವ್ಯವಸ್ಥಾಪಕ ನಿರ್ದೇಶಕ ರುಡೋಲ್ಫ್ ನರೋನ್ಹ, ಸಮ್ಮೇಳನವನ್ನು ಕೇಂದ್ರ ತೈಲ ಮತ್ತು ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಉದ್ಘಾಟಿಸಲಿದ್ದಾರೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಎಂ.ಎಂ.ಕುಟ್ಟಿ ಸೇರಿದಂತೆ ಅನೇಕರು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.
ಪೆಟ್ರೋಕೆಮಿಕಲ್ಸ್ ಮತ್ತು ಸಂಸ್ಕರಣೆ ವಲಯದಲ್ಲಿ ಸುಸ್ಥಿರ ಅಭಿವೃದ್ಧಿಯತ್ತ ಚಾಲನೆ ಎನ್ನುವ ವಿಷಯದ ಆಧಾರದ ಮೇಲೆ ಈ ಸಮ್ಮೇಳನ ನಡೆಯುತ್ತಿದೆ. ಇಲ್ಲಿಗೆ ಬರುವ ದಿನಗಳಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ಕೈಗಾರಿಕಾ ಕ್ಷೇತ್ರದ ಭವಿಷ್ಯ, ಸವಾಲುಗಳು ಮತ್ತು ಅಳವಡಿಸಿಕೊಳ್ಳಬೇಕಾದ ಕಾರ್ಯತಂತ್ರ ವಿಷಯದ ಬಗ್ಗೆ ತೈಲ ಕ್ಷೇತ್ರದ ದಿಗ್ಗಜರು ವಿಚಾರ ಮಂಡನೆ ಮಾಡಲಿದ್ದಾರೆ ಎಂದು ವಿವರಿಸಿದರು.
ಇದೆ ಸಂದರ್ಭದಲ್ಲಿ ಭಾರತಿಯ ತೈಲ ಕ್ಷೇತ್ರದ ಕಾರ್ಯಕ್ಷಮತೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು. ಸಮೇಳನದಲ್ಲಿ ದೇಶ ವಿದೇಶಗಳಿಂದ 1500 ಕ್ಕೂ ಹೆಚ್ಚು ತೈಲ ಮತ್ತು ಅನಿಲ ಕೈಗಾರಿಕ ವೃತ್ತಿಪರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.