ಅಮಿತ್ ಶಾ ಅವರೇ ಮಂಗಳೂರು ಗೋಲಿಬಾರ್ 'ನಕಲಿ ಎನ್ ಕೌಂಟರ್' ಎಂದು ಜನರು ಹೇಳುತ್ತಿದ್ದಾರೆ: ಸಿದ್ದರಾಮಯ್ಯ
ಬೆಂಗಳೂರು, ಜ.18: ''ಮಂಗಳೂರಿನಲ್ಲಿ ಇತ್ತೀಚೆಗೆ ಇಬ್ಬರು ಅಮಾಯಕರು ಪೊಲೀಸ್ ಗುಂಡೇಟಿಗೆ ಬಲಿಯಾಗಿದ್ದಾರೆ. ಸಾರ್ವಜನಿಕವಾಗಿ ಇದೊಂದು ನಕಲಿ ಎನ್ಕೌಂಟರ್ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ನೀವು ದೇಶದ ಗೃಹ ಸಚಿವರು. ಘಟನೆಯ ಬಗ್ಗೆ ಜನರು ಅನುಮಾನ ವ್ಯಕ್ತಪಡಿಸುತ್ತಿರುವಾಗ ಸಮರ್ಪಕ ತನಿಖೆ ನಡೆಯಲಿ ಎಂದು ನಿಮಗೆ ಅನಿಸುವುದಿಲ್ಲವೇ'' ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಅಮಿತ್ ಶಾ ಹುಬ್ಬಳ್ಳಿಯಲ್ಲಿಂದು ಸಿಎಎ, ಎನ್ಆರ್ಸಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಅವರನ್ನುದ್ದೇಶಿಸಿ ಸಿದ್ದರಾಮಯ್ಯ ಸರಣಿ ಟ್ವೀಟ್ ಮೂಲಕ ಒಂದಿಷ್ಟು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
‘‘ಅಮಿತ್ ಶಾ ಅವರೇ, ಸಿಎಎ, ಎನ್ಆರ್ಸಿ ಮೂಲಕ ದೇಶ ಒಡೆಯುವ ಕೆಲಸಕ್ಕೆ ಸ್ವಲ್ಪವಿರಾಮ ನೀಡಿ, ನೆರೆಹಾವಳಿಯಿಂದ ಬದುಕು ಕಳೆದುಕೊಂಡು ಬೀದಿಗೆ ಬಿದ್ದಿರುವ ಸಂತ್ರಸ್ತರ ಕಡೆ ಗಮನಕೊಡಿ’’ ಎಂದು ಒಂದು ಟ್ವೀಟ್ನಲ್ಲಿ ಒತ್ತಾಯಿಸಿದ್ದಾರೆ.
‘‘ನೆರೆ ಹಾವಳಿ ನಷ್ಟಕ್ಕೆ ಪರಿಹಾರ ಕೇಳಿರುವುದು ರೂ.35 ಸಾವಿರ ಕೋಟಿ. ಆದರೆ ಕೇಂದ್ರ ಸರ್ಕಾರ ನೀಡಿರುವುದು ರೂ.1,800 ಕೋಟಿ. ರೂ. ಮೊದಲು ಬಾಕಿ ನೆರೆ ಪರಿಹಾರ ಪಾವತಿ, ನಂತರ ಸಿಎಎ, ಎನ್ಆರ್ಸಿ’’ ಎಂದು ಹೇಳಿದ್ದಾರೆ.
‘‘ಕಳಸಾ ಬಂಡೂರಿ ಯೋಜನೆ ಬಗ್ಗೆ ನಿಮ್ಮ ಪಕ್ಷ ಎರಡು ನಾಲಗೆಯಲ್ಲಿ ಯಾಕೆ ಮಾತನಾಡುತ್ತಿದೆ? ಚುನಾವಣೆಯ ಮೊದಲು ನಮ್ಮ ಪರ, ಈಗ ಗೋವಾ ಪರ. ಹುಬ್ಬಳ್ಳಿ ಸಭೆಯಲ್ಲಿ ಒಂದೇ ನಾಲಗೆಯಲ್ಲಿ ಸ್ಪಷ್ಟೀಕರಣ ಕೊಟ್ಟು ಬಿಡಿ’’ ಎಂದು ಕೇಂದ್ರ ಗೃಹಸಚಿವರನ್ನು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
Mr. @AmitShah,
— Siddaramaiah (@siddaramaiah) January 18, 2020
Two innocent victims were killed in Mangaluru in what public opinion says that it is a fake encounter. You are the Home minister of the Country. Don't you think adequate investigation has to take place when people cry foul about the incident?#AnswerMadiShah