ಕಡಿಮೆ ಅವಧಿಯ ವಿಧಾನಮಂಡಲದ ಅಧಿವೇಶನ ಕೆಟ್ಟ ಬೆಳವಣಿಗೆ: ಸಿದ್ದರಾಮಯ್ಯ
‘ನೆನಪು ಮಾಸುವ ಮುನ್ನ’ ಪುಸ್ತಕ ಬಿಡುಗಡೆ
ಬೆಂಗಳೂರು, ಜ.18: ವಿಧಾನಮಂಡಲದ ಅಧಿವೇಶನ ವರ್ಷದಲ್ಲಿ ಕೇವಲ 17 ರಿಂದ 18 ದಿನ ನಡೆಯುತ್ತಿರುವುದು ಕೆಟ್ಟ ಬೆಳವಣಿಗೆಯಾಗಿದೆ. ಇದು ಹೆಚ್ಚು ದಿನ ನಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಶನಿವಾರ ಪ್ರೆಸ್ಕ್ಲಬ್ನ ಸಭಾಂಗಣದಲ್ಲಿ ಚಿತ್ಕಾಲ ಪ್ರಕಾಶನ ಹಮ್ಮಿಕೊಂಡಿದ್ದ ಹಿರಿಯ ಪತ್ರಕರ್ತ ಎಸ್. ಚಂದ್ರಶೇಖರ್ ರಾವ್(ಸಾಚಾ) ಅವರ ‘ನೆನಪು ಮಾಸುವ ಮುನ್ನ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು ವಿಧಾನಮಂಡಲದ ಕಲಾಪ ವರ್ಷದಲ್ಲಿ 60 ದಿನ ನಡೆಯಬೇಕು. ವಿಧಾನ ಸಭೆಯ ಕಲಾಪಗಳು ಸುದೀರ್ಘ ಕಾಲ ನಡೆಯುವದರಿಂದ ವಿವಿಧ ಇಲಾಖೆಗಳ ಬೇಡಿಕೆಗಳ ಬಗ್ಗೆ ಆರೋಗ್ಯಕರ ಚರ್ಚೆ ನಡಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಮೊದಲೆಲ್ಲಾ ವರ್ಷದಲ್ಲಿ 40ರಿಂದ 50 ದಿನಗಳ ಕಾಲ ವಿಧಾನಸಭೆ ಕಲಾಪ ನಡೆಯುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಕಲಾಪದ ಸಂದರ್ಭದಲ್ಲಿ ಗಲಾಟೆ, ಗೊಂದಲಗಳ ನಡುವೆ ಚರ್ಚೆಗಳು ಅಪೂರ್ಣಗೊಂಡು ಜನರಿಗೆ ಅವಶ್ಯಕವಾದ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಮೌಲ್ಯಾಧಾರಿತ ಚರ್ಚೆಗಳ ಗುಣಮಟ್ಟ ಕುಸಿಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಧಾನಸಭೆ ಕಲಾಪದಲ್ಲಿ ಇದುವರೆಗೂ ರಾಜ್ಯದಲ್ಲಿ ಆದಂತಹ ಬರಗಾಲ, ಅತಿವೃಷ್ಟಿಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಕೇವಲ 3 ದಿನದಲ್ಲಿ ಬಜೆಟ್ ಮೇಲಿನ ಚರ್ಚೆಗಳು ನಡೆದಿದೆ. ಮೊದಲೆಲ್ಲಾ ಕಡಿಮೆ ಮೊತ್ತದ ಬಜೆಟ್ ಮಂಡನೆಯಾಗುತಿತ್ತು. ಈಗ ರಾಜ್ಯದ ಬಜೆಟ್ 2.34 ಲಕ್ಷ ಸಾವಿರ ಕೋಟಿ ರೂ. ಈ ಹಣ ಸರಿಯಾಗಿ ಹಂಚಿಕೆಯಾಗಬೇಕು. ಜನರ ತೆರಿಗೆ ಹಣ ರಾಜ್ಯದ ಸಮಸ್ಯೆಗಳ ನಿವಾರಣೆಗೆ ಸರಿಯಾಗಿ ಹಂಚಿಕೆಯಾಗಬೇಕು ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಪತ್ರಕರ್ತ ಎಸ್. ಚಂದ್ರಶೇಖರ್ ರಾವ್ ಅವರ ‘ನೆನಪು ಮಾಸುವ ಮುನ್ನ’ ಕೃತಿಯು ನಿಜ ಘಟನೆ ಆಧಾರಿತವಾಗಿದ್ದು, ಇದರಲ್ಲಿ ಮಾನವೀಯ ಮೌಲ್ಯಗಳನ್ನು ಕಾಣಬಹುದಾಗಿದೆ. ಯಾವುದೇ ವೈಭವೀಕರಣವಿಲ್ಲದ ಈ ಕೃತಿಯು ಮನಸ್ಸಿಗೆ ನೇರವಾಗಿ ತಟ್ಟುವ ಅದ್ಭುತ ಪುಸ್ತಕವಾಗಿದೆ ಎಂದರು.
ಪ್ರಸ್ತುತವಾಗಿ ವಿವಾದದಲ್ಲಿರುವ ಪೌರತ್ವ ಕಾಯ್ದೆಯ ಕುರಿತು ಪುಸ್ತಕದಲ್ಲಿ ಕಾಣಬಹುದಾಗಿದ್ದು, ಯಾಕೆ ನಾವೆಲ್ಲ ಪೌರತ್ವ ಕಾಯ್ದೆಯನ್ನು ವಿರೋಧಿಸಬೇಕು ಎಂಬುದನ್ನು ಸ್ಪಷ್ಟವಾಗಿ ಸಾಚಾ ಅವರು ತಿಳಿಸಿದ್ದಾರೆ. ಕೃತಿಯಲ್ಲಿ ಪ್ರಸಿದ್ಧ ರಾಜಕೀಯ ನಾಯಕರ ಬಗ್ಗೆಯೂ ಸಹ ಬರೆದಿದ್ದಾರೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಡಾ.ಮಂಜುನಾಥ, ಪತ್ರಕರ್ತರಾದ ಭಾಸ್ಕರ ಶೆಟ್ಟಿ, ಕೆ.ಎನ್.ನಾಗೇಶ ಉಪಸ್ಥಿತರಿದ್ದರು.