ಚುನಾವಣೆಯ ಮೊದಲು ನಮ್ಮ ಪರ, ಈಗ ಗೋವಾ ಪರ: ಆಮಿತ್ ಶಾರನ್ನು ಕುಟುಕಿದ ಸಿದ್ದರಾಮಯ್ಯ
ಬೆಂಗಳೂರು, ಜ. 18: ‘ಗೃಹ ಸಚಿವ ಅಮಿತ್ ಶಾ ಅವರೇ, ಕಳಸಾ-ಬಂಡೂರಿ ಯೋಜನೆ ಬಗ್ಗೆ ನಿಮ್ಮ ಪಕ್ಷ ಎರಡು ನಾಲಿಗೆಯಲ್ಲಿ ಯಾಕೆ ಮಾತನಾಡುತ್ತಿದೆ? ಚುನಾವಣೆಯ ಮೊದಲು ನಮ್ಮ ಪರ, ಈಗ ಗೋವಾ ಪರ. ಹುಬ್ಬಳ್ಳಿ ಸಭೆಯಲ್ಲಿ ಒಂದೇ ನಾಲಗೆಯಲ್ಲಿ ಸ್ಪಷ್ಟೀಕರಣ ಕೊಟ್ಟು ಬಿಡಿ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಗೃಹ ಸಚಿವ ಅಮಿತ್ ಶಾ, ನೆರೆ ಹಾವಳಿ ನಷ್ಟಕ್ಕೆ ಪರಿಹಾರ ಕೇಳಿರುವುದು 35 ಸಾವಿರ ಕೋಟಿ ರೂ., ಕೇಂದ್ರ ಸರಕಾರ ನೀಡಿರುವುದು 1,800 ಕೋಟಿ ರೂ., ಮೊದಲು ಬಾಕಿ ನೆರೆ ಪರಿಹಾರ ಪಾವತಿ ನಂತರ ಸಿಎಎ, ಎನ್ಆರ್ಸಿ’ ಎಂದು ತಿರುಗೇಟು ನೀಡಿದ್ದಾರೆ.
‘ಅಮಿತ್ ಶಾ ಅವರೇ, ಸಿಎಎ, ಎನ್ಆರ್ಸಿ ಮೂಲಕ ದೇಶ ಒಡೆಯುವ ಕೆಲಸಕ್ಕೆ ಸ್ವಲ್ಪ ವಿರಾಮ ನೀಡಿ, ನೆರೆಹಾವಳಿಯಿಂದ ಬದುಕು ಕಳೆದುಕೊಂಡು ಬೀದಿಗೆ ಬಿದ್ದಿರುವ ರಾಜ್ಯದ ಸಂತ್ರಸ್ತರ ಕಡೆ ಗಮನ ಕೊಡಿ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
Next Story