ಚೀನಾದ ಅಭಿವೃದ್ಧಿ ಕ್ರಮಗಳನ್ನು ನಾವು ಅನುಸರಿಸಬೇಕು: ಪಿ.ಜಿ.ಆರ್.ಸಿಂಧ್ಯಾ
ಪೀಪಲ್ಸ್ ರಿಪಬ್ಲಿಕ್ ಚೀನಾ ಮತ್ತು ಇಂಡಿಯಾ-ಚೀನಾ ಫ್ರೆಂಡ್ಶಿಪ್ ಅಸೋಸಿಯೇಷನ್ ಸಂಸ್ಥೆಗಳ 70ನೇ ವಾರ್ಷಿಕೋತ್ಸವ
ಬೆಂಗಳೂರು, ಜ.19:ಚೀನಾದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಭಾರತೀಯರನ್ನು ಚಕಿತಗೊಳಿಸಿದ್ದು, ಅವರ ಅಭಿವೃದ್ಧಿ ಕ್ರಮಗಳನ್ನು ನಾವು ಅನುಸರಿಸಬೇಕಿದೆ ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.
ರವಿವಾರ ನಗರದ ಖಾಸಗಿ ಹೋಟೆಲ್ನಲ್ಲಿ ಏರ್ಪಡಿಸಿದ್ದ ಪೀಪಲ್ಸ್ ರಿಪಬ್ಲಿಕ್ ಚೀನಾ ಮತ್ತು ಇಂಡಿಯಾ-ಚೀನಾ ಫ್ರೆಂಡ್ಶಿಪ್ ಅಸೋಸಿಯೇಷನ್ ಸಂಸ್ಥೆಗಳ 70ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಮತ್ತು ಚೀನಾದ ನಡುವೆ ಸಂಬಂಧ ಗಟ್ಟಿಗೊಳ್ಳಲು ಚೀನಾ ರಾಯಭಾರಿತನ ಉತ್ತಮವಾಗಿದೆ. ನಮ್ಮಲ್ಲಿನ ಉತ್ತಮ ಆಲೋಚನೆಗಳನ್ನು ಹಂಚಿಕೊಳ್ಳುವುದರಿಂದ ಎರಡೂ ರಾಷ್ಟ್ರಗಳು ಮತ್ತಷ್ಟು ಬಲಿಷ್ಠವಾಗಿ ಬೆಳೆಯಬಹುದು. ಭಾರತ ಮತ್ತು ಚೀನಾದ ಸೌಹಾರ್ದ ಸಂಘವು ಉತ್ತಮವಾಗಿ ಬೆಳೆಯಲು ಹಲವರು ಇದಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದರು.
ಚೀನಾ ವಿಶ್ವವಿದ್ಯಾಲಯಗಳು ತತ್ವಶಾಸ್ತ್ರವನ್ನು ಬೋಧಿಸುತ್ತವೆ. ಅಲ್ಲಿನ ಶಿಕ್ಷಣ ಉನ್ನತ ಮಟ್ಟದಲ್ಲಿದೆ ಮತ್ತು ವೆಚ್ಚದಾಯಕವಾಗಿಲ್ಲ. ಆದ್ದರಿಂದ ಅನೇಕರು ಚೀನಾ ವಿಶ್ವವಿದ್ಯಾಲಯಗಳಲ್ಲಿ ಅಭ್ಯಾಸ ಮಾಡುತ್ತಾರೆ. ನಮ್ಮಲ್ಲಿನ ತಪ್ಪು ಕಲ್ಪನೆಗಳನ್ನು ನಿವಾರಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು. ಚೀನಾ ರಾಯಭಾರಿ ಸನ್ ವಿಡೊಂಗ್ ಮಾತನಾಡಿ, ಇಡೀ ವಿಶ್ವದಲ್ಲಿ ಚೀನಾ ಎರಡನೇ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿದೆ. ಭಾರತ ಮತ್ತು ಚೀನಾ ಜಗತ್ತಿನ ಶೇ.1/3ರಷ್ಟು ಮಾನವ ಸಂಪನ್ಮೂಲವನ್ನು ಹೊಂದಿವೆ. ಭಾರತ ಮತ್ತು ಚೀನಾ ಎರಡೂ ರಾಷ್ಟ್ರಗಳು ಒಂದಾದರೆ ಇಡೀ ವಿಶ್ವವೇ ನಮ್ಮ ಮಾತು ಕೇಳುತ್ತವೆ. ರವೀಂದ್ರನಾಥ್ ಠಾಗೂರರು ಭಾರತದ್ಲಲಿ ಚೀನಾ ಅಕಾಡೆಮಿಯನ್ನು ಸ್ಥಾಪಿಸುವ ಮೂಲಕ ಚೀನಾದ ಜೊತೆ ಬಾಂಧವ್ಯ ವೃದ್ಧಿಸಲು ಸಹಾಯ ಮಾಡಿದ್ದಾರೆ. ಭವಿಷ್ಯದಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಮತ್ತಷ್ಟು ವೃದ್ಧಿಗೊಳ್ಳಲಿದೆ ಎಂದು ಆಶಯ ವ್ಯಕ್ತಪಡಿಸಿದರು. ಶಾಸಕ ಶ್ರೀನಿವಾಸ ಗೌಡ ಮಾತನಾಡಿ, ಭಾರತ ಮತ್ತು ಚೀನಾ ನಡುವೆ ಉತ್ತಮ ಸಂಬಂಧ ಹೊಂದಿದ್ದು ಈ ಎರಡು ದೇಶಗಳ ನಡುವೆ ಯುದ್ದ ಆದಾ ನಂತರ ನಾವು ಚೀನಾಕ್ಕೆ ಭೇಟಿ ನೀಡಿದಾಗ ಅಲ್ಲಿನ ಕೃಷಿಕರು ತುಂಬಾ ಆತ್ಮೀಯವಾಗಿ ನಮ್ಮನ್ನ ಬರಮಾಡಿಕೊಂಡಿದ್ದಾರೆ. ಹೀಗೆ ನಮ್ಮ ನಡುವಿನ ಸಂಬಂಧಗಳು ಮುಂದುವರೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭಾರತ-ಚೀನಾ ಕುರಿತ ಸ್ಮರಣ ಸಂಚಿಕೆಯನ್ನ ಬಿಡುಗಡೆ ಮಾಡಲಾಯಿತು. ಐಸಿಎಫ್ಐ ನ ಸಾಂಸ್ಕೃತಿಕ ಸಲಹೆಗಾರ ರೂಂಗ್ ಜಿಯಾಕ್ಸಿನ್, ಐಸಿಎಫ್ಐ ನ ನಿರ್ದೇಶಕ ಯಾಂಗ್ ತೈನ್ ವೆನ್, ಪ್ರೊ.ಬಾವು, ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಭಾಸ್ಕರನ್ ಸೇರಿದಂತೆ ಪ್ರಮುಖರಿದ್ದರು.