ಭಾರತದ ಅತ್ಯಂತ ಕಿರಿಯ ಕವನಗಾರ್ತಿ 'ಗ್ರಾಂಡ್ ಮಾಸ್ಟರ್ ಮಾನ್ಯ ಹರ್ಷ'
'ನೇಚರ್ ಅವರ್ ಫ್ಯೂಚರ್' ಪುಸ್ತಕ ಬರೆದ ಬಾಲಕಿ
ಬೆಂಗಳೂರು : ಒಂಭತ್ತನೇ ವಯಸ್ಸಿಗೇ ಪುಸ್ತಕ ಬರೆದು, ಭಾರತದ ಅತ್ಯಂತ ಕಿರಿಯ ಕವನಗಾರ್ತಿ ಎಂಬ ಬಿರುದಿಗೆ ಪಾತ್ರಳಾಗಿದ್ದು ಬೆಂಗಳೂರಿನ ಚಿತ್ರ ಹಾಗೂ ಹರ್ಷ ದಂಪತಿಯ ಪುತ್ರಿ ಮಾನ್ಯ ಹರ್ಷ.
ಬೆಂಗಳೂರಿನ ವಿಬ್ಗಯಾರ್ ಹೈ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿರುವ ಈಕೆ, ಐದು ದಾಖಲೆಗಳ ಒಡತಿ. ಏಷಿಯಾ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ವಜ್ರ ವರ್ಲ್ಡ್ ರೆಕಾರ್ಡ್, ಗೋಲ್ಡನ್ ಬುಕ್ ಆಫ್ ರೆಕಾರ್ಡ್, ವರ್ಲ್ಡ್ ರೆಕಾರ್ಡ್ಸ್ ಇಂಡಿಯಾ ವತಿಯಿಂದ ಐದು ಬಿರುದುಗಳು ಈ ಪುಟ್ಟ ಬಾಲಕಿಗೆ ಪ್ರಾಪ್ತವಾಗಿದೆ.
ಚಿಕ್ಕ ವಯಸ್ಸಿನಲ್ಲೇ, ಪರಿಸರ ಪ್ರಜ್ಞೆ ಹಾಗೂ ಕಾಳಜಿ ಬೆಳೆಸಿಕೊಂಡಿರುವ ಒಂಬತ್ತರ ಹರೆಯದ ಮಾನ್ಯ ಹರ್ಷ, " ನೇಚರ್ ಅವರ್ ಫ್ಯೂಚರ್" ಪುಸ್ತಕ ಬರೆದು "ಭಾರತದ ಕಿರಿಯ ಕವನಗಾರ್ತಿ" ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾಳೆ.
ಜುಲೈ 5, 2019ರಂದು ಮುದ್ರಣಗೊಂಡ "ನೇಚರ್ ಅವರ್ ಫ್ಯೂಚರ್" ಪುಸ್ತಕ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಗಿಟ್ಟಿಸಿಕೊಂಡಿದೆ. 55 ಕವನಗಳನ್ನು ಒಳಗೊಂಡಿರುವ ಈ ಪುಸ್ತಕ, ಚಿನ್ನರಲ್ಲಿ ಪರಿಸರ ಪ್ರಜ್ಞೆ ಮೂಡಿಸಿದೆ. ದೇಶ, ದೇಶ ಪ್ರೇಮ, ಸೈನಿಕರ ತ್ಯಾಗ-ಬಲಿದಾನ, ಪ್ರಕೃತಿ, ಪರಿಸರ, ಹೆಣ್ಣಿನ ಮಹತ್ವದ ಬಗ್ಗೆ ಕವನಗಳನ್ನು ಒಳಗೊಂಡಿರುವ ಈ ಪುಸ್ತಕ ದಾಖಲೆ ಸೃಷ್ಟಿಸಿದೆ.
ವಜ್ರ ವರ್ಲ್ಡ್ ರೆಕಾರ್ಡ್ ವತಿಯಿಂದ ಈ ಪುಸ್ತಕ ಬರೆದ ಮಾನ್ಯ ಹರ್ಷ "ಭಾರತದ ಅತ್ಯಂತ ಕಿರಿಯ ಕವನಗಾರ್ತಿ" ಎಂಬ ಬಿರುದು ನೀಡಿ ಸನ್ಮಾನಿಸಲಾಗಿದೆ. ಏಷಿಯಾ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ, "ಗ್ರಾಂಡ್ ಮಾಸ್ಟರ್" ಬಿರುದು , ಪಾರಿತೋಷಕ ನೀಡಿ ಗೌರವಿಸಲಾಗಿದೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ" ಪರಿಸರ ಕುರಿತ ಕವನಗಳು ರಚಿಸಿದ ಅತ್ಯಂತ ಕಿರಿಯ ಕವನಗಾರ್ತಿ ಎಂಬ ಬಿರುದು, ಪಾರಿತೋಷಕ ನೀಡಿ ಗೌರವಿಸಲಾಗಿದೆ. ಕಿರಿಯ ವಯಸ್ಸಿನಲ್ಲಿ ನೇಚರ್ ವಿಚಾರವಾಗಿ ಪುಸ್ತಕ ಬರೆದಿರುವ ಕಿರಿಯ ಬರಹಗಾರ್ತಿ ವಲ್ಡ್ ರೆಕಾರ್ಡ್ಸ್ ಇಂಡಿಯಾ ಬಿರುದಿನ ಜೊತೆಗೆ ವಜ್ರ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಯೂ ದೊರಕಿದೆ.
2018ರ ಕಿಡ್ಸ್ ವರ್ಲ್ಡ್ ಅಂತಾರಾಷ್ಟ್ರೀಯ ಸಣ್ಣ ಕಥೆಗಳ ಪ್ರಶಸ್ತಿಗೂ ಮಾನ್ಯ ಪಾತ್ರರಾಗಿದ್ದಾಳೆ. ಈಕೆ ರಚಿಸಿದ," ಥಾಂಕ್ಸ್ ಗಿವಿಂಗ್" ಸಣ್ಣ ಕಥೆಯು ಭಾರೀ ಪ್ರಶಂಸೆಗೆ ಒಳಪಟ್ಟಿದೆ. ಮೂರು ವರ್ಷಗಳ, ಪುಸ್ತಕ ಮುದ್ರಿಸುವ, ಈಕೆಯ ಕನಸು ಈಗ ನನಸಾಗಿದೆ. "ನೇಚರ್ ಅವರ್ ಫ್ಯೂಚರ್" ಪುಸ್ತಕ ಮಾನ್ಯಾಳ ಪರಿಸರ ಪ್ರಜ್ಞೆ ಹಾಗೂ ಕಾಳಜಿಗೆ ಕನ್ನಡಿ ಹಿಡಿದಂತಿದೆ.
ಮಾರ್ಚ್ 22, 2018ರಲ್ಲಿ ವಿಶ್ವ ಜಲ ಸಂರಕ್ಷಣಾ ದಿನಾಚರಣೆ ಅಂಗವಾಗಿ , ಚಿನ್ನದ ವಾಕಥಾನ್ ಆಯೋಜಿಸಿದ್ದ ಈ ಪೋರಿ, ಸ್ನೇಹಿತರೊಂದಿಗೆ "ನೀರು ಉಳಿಸಿ" ಆಂದೋಲನ ನಡೆಸಿದ್ದಳು. ಅಂತೆಯೇ, ಜೆ.ಪಿ.ನಗರದ ಪುಟ್ಟೇನಹಳ್ಳಿ ಕೆರೆಗೆ ಕಾಲ್ನಡಿಗೆಯಲ್ಲಿ ತೆರಳಿ, ಗಿಡಗಳನ್ನು ನೆಟ್ಟು ಪರಿಸರ ಪ್ರಜ್ಞೆ ಮೂಡಿಸದಳು ಮಾನ್ಯ ಹರ್ಷ.
ಕಲೆ, ಕ್ರೀಡೆ ಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಮಾನ್ಯ, ಹಾಡು, ಕುಣಿತ, ಈಜುಗಾರಿಕೆಯಲ್ಲಿ ಹಲವಾರು ಪ್ರಶಸ್ತಿ ಗೌರವಗಳನ್ನು ಪಡೆದಿದ್ದಾಳೆ. ಕರಾಟೆ ಹಾಗೂ ಟೆಕ್ವಾಂಡೋ ವಿದ್ಯೆ ರೂಢಿಸಿಕೊಂಡಿರುವ ಮಾನ್ಯ ಕಲೆ-ಸಾಹಿತ್ಯ-ಕ್ರೀಡೆಗಳಲ್ಲಿ ಮುಂಚೂಣಿಯಲ್ಲಿ ದ್ದಾಳೆ.
ಈಕೆಯ ತಾಯಿ ಚಿತ್ರಾ ಮಗಳ ಸಾಧನೆಯ ಬಗ್ಗೆ ಪ್ರತಿಕ್ರಿಯಿಸಿ, ಸಣ್ಣ ವಯಸ್ಸಿನಲ್ಲಿ ಮಾನ್ಯಳಿಗೆ ಪರಿಸರ ಕಾಳಜಿಯನ್ನು ಬೆಳೆಸಿ ದ್ದೇವೆ. ಇದು ಪೋಷಕರಾದ ನಮ್ಮ ಕರ್ತವ್ಯವೂ ಹೌದು. ಇವಳ ಸಾಧನೆ ಬಗ್ಗೆ ಹೆಮ್ಮೆಯಿದೆ ಎಂದಿದ್ದಾರೆ.