ಸಂಘಪರಿವಾರದ ಪ್ರಥಮ ಟಾರ್ಗೆಟ್ ದಲಿತರು: ಸಸಿಕಾಂತ್ ಸೆಂಥಿಲ್
ಬೆಂಗಳೂರು, ಜ.26: ಸಂಘ ಪರಿವಾರದ ಪ್ರಥಮ ಟಾರ್ಗೆಟ್ ದಲಿತರೇ ಹೊರತು, ಮುಸಲ್ಮಾನರಲ್ಲ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಐಎಎಸ್ ಮಾಜಿ ಅಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.
ರವಿವಾರ ನಗರದ ಫ್ರೀಡಂ ಪಾರ್ಕ್ ಮೈದಾನದಲ್ಲಿ ಆದಿವಾಸಿ, ಅಲೆಮಾರಿ, ದಲಿತ ಮತ್ತು ಹಿಂದುಳಿದ ಜಾತಿ ಸಂಘಟನೆಗಳ ವೇದಿಕೆ, ನಾವು ಭಾರತೀಯರು ನೇತತ್ವದಲ್ಲಿ ಸಿಎಎ, ಎನ್ಪಿಆರ್,ಎನ್ಆರ್ಸಿ ಹಾಗೂ ಇವಿಎಂ ವಿರುದ್ಧ ಹಮ್ಮಿಕೊಂಡಿದ್ದ ಸಂವಿಧಾನದ ಉಳಿವಿಗಾಗಿ ಪ್ರತಿಭಟನಾ ರ್ಯಾಲಿ ಮತ್ತು ಜನ ಜಾಗೃತಿ ಆಂದೋಲನ ಸಮಾವೇಶದಲ್ಲಿ ಅವರು ಮಾತನಾಡಿದರು.
ಈ ದೇಶದ ಮೂಲ ನಿವಾಸಿಗಳು ನಾವು. ಸಂವಿಧಾನಕ್ಕೆ ಧಕ್ಕೆ ತರುವಾಗ ಕೂತು ನೋಡುವುದಿಲ್ಲ. ನಾವು ತಡವಾಗಿ ಹೊರಗಡೆ ಬಂದಿದ್ದೇವೆ. ಆದರೆ ಇನ್ನೂ ಮನೆಯ ಒಳಗಡೆ ಕೂತಿದ್ದಾರೆ ಅದು ನಿಮ್ಮ ಮಕ್ಕಳಿಗೆ ದ್ರೋಹ ಮಾಡಿದಂತೆ. ಅಷ್ಟೇ ಅಲ್ಲದೆ, ನೀವು ಇನ್ನು ಮನೆಯಲ್ಲೇ ಕೂತರೇ 70 ವರ್ಷದ ಹಿಂದಿನ ಸ್ಥಿತಿಯಲ್ಲಿ ಇರಬೇಕಾಗುತ್ತವೆ ಎಂದು ಆಪಾದಿಸಿದರು.
ಈಗ ಅವರು ಕೇಳುತ್ತಿರುವ ದಾಖಲಾತಿ, ಈ ದಾಖಲಾತಿ ನಮ್ಮಲ್ಲಿ ಇಲ್ಲ. ಇದರಿಂದ ಹೊರಗಿಳಿಯುವುದು ಆದಿವಾಸಿಗಳು, ದಲಿತರು, ಮುಸಲ್ಮಾನರು. ಹಾಗಾಗಿ ಎಲ್ಲರೂ ಈಗಲಾದರೂ ಎಚ್ಚೆತ್ತುಕೊಂಡು ಮುಂದೆ ಬನ್ನಿ. ಇಲ್ಲದಿದ್ದರೆ ಮನುಸಂಸ್ಕೃತಿ ಬರಲಿದೆ ಎಂದು ತಿಳಿಸಿದರು.
ಈಗ ಎಪ್ರಿಲ್ನಲ್ಲಿ ಎನ್ಪಿಆರ್ ಜಾರಿಗೆ ಬಂದು ಅದರಲ್ಲಿ ಸಿಎಎ ಕಾಯ್ದೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಾರೆ. ಜೊತೆಗೆ ಜನಗಣತಿಯ ಪ್ರಶ್ನೆಗಳು ಬರುತ್ತವೆ. ಆಗ ನೀವು ಕೇವಲ ಜನಗಣತಿ ಪ್ರಶ್ನೆಗಳಿಗೆ ಮಾತ್ರ ಮಾಹಿತಿ ನೀಡಿ ಬೇರೆ ಪ್ರಶ್ನೆಗಳಿಗೆ ಮಾಹಿತಿ ನೀಡಬೇಡಿ. ಇದರಿಂದ ನಿಮ್ಮ ಮೂಲಭೂತ ಹಕ್ಕುಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು.