ಖಾಸಗಿ ಶಾಲೆಯಲ್ಲಿ ಕನ್ನಡ ಮಾತನಾಡಿದ ವಿದ್ಯಾರ್ಥಿಗಳಿಗೆ ದಂಡ !
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗರಂ
ಬೆಂಗಳೂರು, ಫೆ.3: ನಗರದ ಹೊರಮಾವು ಬಳಿಯ ಚೆನ್ನಸಂದ್ರದಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಕನ್ನಡ ಮಾತನಾಡಿದ ಶಾಲೆಯ ವಿದ್ಯಾರ್ಥಿಗಳಿಗೆ ದಂಡ ವಿಧಿಸಲು ಸಂಸ್ಥೆ ತೀರ್ಮಾನ ಕೈಗೊಂಡಿದ್ದು, ಈ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗರಂ ಆಗಿದೆ.
ಹೊರಮಾವು ಬಳಿಯ ಚೆನ್ನಸಂದ್ರದಲ್ಲಿರುವ ಎಸ್ಎಲ್ಎಸ್ ಇಂಟರ್ನ್ಯಾಷನಲ್ ಗುರುಕುಲ ಎನ್ನುವ ಹೆಸರಿನ ಶಾಲೆಯಲ್ಲಿ ವಿದ್ಯಾರ್ಥಿಗಳು ಮೊದಲಿಗೆ ಕನ್ನಡದಲ್ಲಿ ಮಾತನಾಡಿದರೆ ಐವತ್ತು ರೂ. ಹಾಗೂ ಎರಡನೇ ಬಾರಿ ಕನ್ನಡದಲ್ಲಿ ಮಾತನಾಡಿದರೆ ನೂರು ರೂ. ದಂಡ ವಿಧಿಸಲು ಸಂಸ್ಥೆಯು ತೀರ್ಮಾನ ಕೈಗೊಂಡಿದೆ. ಇದನ್ನು ತಿಳಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಶಾಲೆಯ ಮುಖ್ಯಸ್ಥರಿಗೆ ನೋಟಿಸ್ ನೀಡಿ, ಈ ರೀತಿಯ ನಡೆಯನ್ನು ಖಂಡಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಶಾಲೆಯ ಮುಖ್ಯ ಶಿಕ್ಷಕಿ ಹೇಮಾವತಿ ಹರೀಶ್ ಕುಮಾರ್, ನಮ್ಮ ಸಂಸ್ಥೆಯಲ್ಲಿ ತೆಲುಗು, ತಮಿಳು ಮತ್ತು ಮರಾಠಿ ಭಾಷೆ ಮಾತನಾಡುವ ವಿದ್ಯಾರ್ಥಿಗಳಿದ್ದಾರೆ. ಇವರಿಂದ ನಮ್ಮ ರಾಜ್ಯದ ಮಕ್ಕಳಿಗೆ ತೊಂದರೆಯಾಗುತಿತ್ತು. ಆದ್ದರಿಂದ ಅನ್ಯ ಭಾಷೆಯ ಮಕ್ಕಳಿಗೆ ಇಂಗ್ಲಿಷಿನಲ್ಲಿ ಮಾತನಾಡುವಂತೆ ಹೇಳಲಾಗಿತ್ತು ಹಾಗು ಈ ಕುರಿತು ತರಗತಿ ಶಿಕ್ಷಕರಿಗೆ ಲಿಖಿತವಾಗಿ ತಿಳಿಸಲಾಗಿತ್ತು ಎಂದು ತಿಳಿಸಿದ್ದಾರೆ.