ಹತ್ತು ಸಾವಿರ ಕೋಟಿ ರೂ. ಬಜೆಟ್ನ ಲೆಕ್ಕ ಕೊಡಿ: ಬಿಬಿಎಂಪಿ ಆಡಳಿತದ ವಿರುದ್ಧ ಆನ್ಲೈನ್ ಅಭಿಯಾನ
ಬೆಂಗಳೂರು, ಫೆ.11: ಬೆಂಗಳೂರು ನವನಿರ್ಮಾಣ ಎಂಬ ನೂತನ ಪಕ್ಷವು ಬಿಬಿಎಂಪಿ ಆಡಳಿತದ ವಿರುದ್ಧ ಆನ್ಲೈನ್ ಅಭಿಯಾನ ಆರಂಭಿಸಿದ್ದು, ಪಾಲಿಕೆಯಲ್ಲಿ ಹತ್ತು ಸಾವಿರ ಕೋಟಿ ಬಜೆಟ್ ಮಂಡಿಸಿದರೂ ಸಹ ಅಭಿವೃದ್ಧಿ ಮಾತ್ರ ಶೂನ್ಯ ಎಂದು ಅಭಿಯಾನದಲ್ಲಿ ಆರೋಪಿಸಲಾಗುತ್ತಿದೆ.
ಬಿಬಿಎಂಪಿ ಪ್ರತೀ ವರ್ಷ ಹತ್ತು ಸಾವಿರ ಕೋಟಿ ರೂ. ಮೊತ್ತವನ್ನೂ ಮೀರಿ ಆಯವ್ಯಯ ಮಂಡಿಸುತ್ತಿದೆ. ಆದರೆ ಪಾಲಿಕೆ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳು ಮಾತ್ರ ಅಭಿವೃದ್ಧಿಯಾಗದೆ ಹಾಗೇ ಇವೆ. ಎಲ್ಲೆಂದರಲ್ಲಿ ಕಸದ ರಾಶಿ, ರಾಜಕಾಲುವೆ ನಿರ್ವಹಣೆ ಕೊರತೆ, ರಸ್ತೆ ಗುಂಡಿ ಸಮಸ್ಯೆಗಳು ಹಾಗೆಯೇ ಇವೆ. ನಮ್ಮ ತೆರಿಗೆ ಹಣ ಎಲ್ಲಿ ಹೋಗುತ್ತಿದೆ. ನಮಗೆ ಲೆಕ್ಕ ಕೊಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಬಿಎಂಪಿ ಆಡಳಿತದ ವಿರುದ್ಧ ಅಭಿಯಾನ ನಡೆಸಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ಬಿಬಿಎಂಪಿ ವ್ಯಾಪ್ತಿಯ ಸಂಸದರು, ಶಾಸಕರು, ಪಾಲಿಕೆ ಸದಸ್ಯರ ಸಲಹೆ ಪಡೆದೇ ಬಜೆಟ್ ಮಂಡನೆ ಮಾಡುವುದು. ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಮಾಡುವ ಅಧಿಕಾರ ಎಲ್ಲರಿಗೂ ಇದೆ. ಕೆಲವೆಡೆ ಕಾಮಗಾರಿಗಳು ಕಳಪೆಯಾಗಿವೆ. ಅವುಗಳನ್ನು ಸರಿಪಡಿಸಲಾಗುವುದು ಮತ್ತು ಮೂಲಭೂತ ಸೌಕರ್ಯ ನೀಡಲಾಗುವುದು ಎಂದು ತಿಳಿಸಿದ್ದಾರೆ.