ಸದನದಲ್ಲಿ ಗದ್ದಲ ಸೃಷ್ಟಿಸಿದ ‘ತುಕಡೆ ಗ್ಯಾಂಗ್’, ಸದ್ದು ಮಾಡಿದ 'ಶಾಹೀನ್ ಶಾಲೆ'
ಬೆಂಗಳೂರು, ಫೆ. 18: ‘ತುಕಡೆ ತುಕಡೆ ಗ್ಯಾಂಗ್’ ವಿಚಾರ ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ಸದಸ್ಯರ ಮಧ್ಯೆ ಕೆಲಕಾಲ ಪರಸ್ಪರ ಏರಿದ ಧ್ವನಿಯಲ್ಲಿ ಆರೋಪ-ಪ್ರತ್ಯಾರೋಪ ಮತ್ತು ವಾಕ್ಸಮರಕ್ಕೂ ಕಾರಣವಾಯಿತು.
ಮಂಗಳವಾರ ವಿಧಾನಸಭೆಯಲ್ಲಿ ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಸರಕಾರ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ’ ಎಂದು ಆರೋಪಿಸಿ ನಿಲುವಳಿ ಸೂಚನೆಯ ಪೂರ್ವಭಾವಿ ಪ್ರಸ್ತಾಪದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡುತ್ತಿದ್ದರು.
ಈ ವೇಳೆ ಎದ್ದುನಿಂತ ಸಚಿವ ಬಸವರಾಜ ಬೊಮ್ಮಾಯಿ, ‘ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡಿದ್ದರೂ ಅಘೋಷಿತ ತುರ್ತು ಪರಿಸ್ಥಿತಿ ಎನ್ನುತ್ತೀರಿ. ಈ ರೀತಿ ಹೇಳುವುದು ಒಂದು ಫ್ಯಾಷನ್ ಆಗಿಬಿಟ್ಟಿದೆ’ ಎಂದರು. ಇದಕ್ಕೆ ಧ್ವನಿಗೂಡಿಸಿದ ಸಚಿವ ಸಿ.ಟಿ.ರವಿ, ‘ನೀವು ಬ್ರಿಗೇಡ್ನಲ್ಲಿ ಇರಲಿಲ್ಲ, ಸಮರ್ಥನೆ ಮಾಡಿಕೊಳ್ಳಬೇಡಿ, ಇಂದಿರಾ ಗಾಂಧಿ ಸಂವಿಧಾನವನ್ನೇ ಗಾಳಿಗೆ ತೂರಿದ್ದರು’ ಎಂದು ಕಾಲೆಳೆದರು.
ಇದಕ್ಕೆ ಕೊಂಚ ಮಸಾಲೆ ಬೆರೆಸುವ ರೀತಿಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ, ‘ಈ ಹಿಂದೆ ಸಿದ್ದರಾಮಯ್ಯ, ಇಂದಿರಾ ಗಾಂಧಿಯವರನ್ನು ಟೀಕೆ ಮಾಡಿದ್ದರು. ಇದೀಗ ಅವರು ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ. ಭಾರತ ಮಾತಾಕೀ ಜೈ ಅಂದವರನ್ನೆಲ್ಲ ಆಗ ಜೈಲಿಗೆ ಹಾಕಿದ್ದರು ಎಂದರು.
ಈ ವೇಳೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಭಾರತ ಮಾತೆ ಬಿಜೆಪಿಯವರ ಗುತ್ತಿಗೆಯಲ್ಲ. ದೇಶದ 135 ಕೋಟಿ ಜನರು ಭಾರತಮಾತೆಯ ಮಕ್ಕಳೇ ಎಂದರು. ಈ ಹಂತದಲ್ಲಿ ಬಸವರಾಜ ಬೊಮ್ಮಾಯಿ, ‘ಕೆಲವರು ತುಕಡೆ ಗ್ಯಾಂಗ್ನಲ್ಲಿದ್ದಾರೆ’ ಎಂದರು.
ಇದರಿಂದ ಕೆರಳಿದ ಕಾಂಗ್ರೆಸಿನ ಪ್ರಿಯಾಂಕ್ ಖರ್ಗೆ, ಸೌಮ್ಯರೆಡ್ಡಿ, ಯು.ಟಿ. ಖಾದರ್, ಈಶ್ವರ್ ಖಂಡ್ರೆ, ರಿಝ್ವಾನ್ ಅರ್ಶದ್, ದಿನೇಶ್ ಗುಂಡೂರಾವ್ ಸೇರಿ ಇನ್ನಿತರ ಸದಸ್ಯರು, ‘ತುಕಡೆ ಗ್ಯಾಂಗ್ನಲ್ಲಿ ಯಾರ್ಯಾರು ಇದ್ದಾರೆ, ನಿಮಗೆ ತಾಕತ್ತು ಇದ್ದರೆ ಅವರೆಲ್ಲರನ್ನೂ ಕೂಡಲೇ ಬಂಧಿಸಿ’ ಎಂದು ಏರಿದ ಧ್ವನಿಯಲ್ಲಿ ಸವಾಲು ಹಾಕಿದರು.
‘ಕೇಂದ್ರದ ನಿಮ್ಮ ಗೃಹ ಸಚಿವ ಅಮಿತ್ ಶಾ ಅವರೇ ಸಂಸತ್ನಲ್ಲಿ ಉತ್ತರ ನೀಡಿದ್ದು, ದೇಶದಲ್ಲಿ ತುಕಡೆ ತುಕಡೆ ಗ್ಯಾಂಗ್ ಇಲ್ಲ ಎಂದಿದ್ದಾರೆ. ಆದರೆ, ನೀವು ಒಬ್ಬ ಗೃಹ ಸಚಿವರಾಗಿ ಹೀಗೆಲ್ಲ ಮಾತನಾಡಬೇಡಿ. ತುಕಡೆ ತುಕಡೆ ಗ್ಯಾಂಗ್ ಎಂದರೆ ಏನು ವಿವರಣೆ ಕೊಡಿ’ ಎಂದು ಪಟ್ಟು ಹಿಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ‘ತುಕಡೆ ಗ್ಯಾಂಗ್ಗೆ ಕಾಂಗ್ರೆಸ್ ಮುಖಂಡರೇ ಮಾಲಕರು. ನಾವು ಬಂಧಿಸಿದರೆ ಅಡ್ಡಿ ಮಾಡುತ್ತೀರಿ. ಅಫ್ಜಲ್ ಗುರುವನ್ನು ನೇಣಿಗೆ ಹಾಕಿದರೆ ವಿರೋಧ ಮಾಡುತ್ತೀರಿ’ ಎಂದು ತಿರುಗೇಟು ನೀಡಿದರು. ಇದರಿಂದ ಸದನದಲ್ಲಿ ಕಾವೇರಿದ ವಾತಾವರಣ ಸೃಷ್ಟಿಯಾಯಿತು.
‘ಬೀದರ್ನ ಶಾಹೀನ್ ಶಾಲೆಗೆ ಒಂದು ಕಾನೂನು ಮತ್ತು ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಗೆ ಒಂದು ಕಾನೂನು. ಬಿಜೆಪಿ ಐಟಿ ಸೆಲ್ನಂತೆ ಮಾತನಾಡುವುದನ್ನು ಬಿಟ್ಟು ಗೃಹ ಸಚಿವರಾಗಿ ಕೆಲಸ ಮಾಡಿ. ರಾಜ್ಯದಲ್ಲಿ ಆಡಳಿತ ನಡೆಸಿ ಎಂದರೆ ಎಲ್ಲದಕ್ಕೂ ಪಾಕಿಸ್ತಾನದ ಹೆಸರೇಳ್ತೀರಿ. ಪುಕ್ಕಟೆ ಬಿರಿಯಾನಿ ತಿನ್ನಲು ಪಾಕ್ಗೆ ಹೋದವರು ಯಾರು’ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಈ ಮಧ್ಯೆ ಎದ್ದುನಿಂತ ಸಿಎಂ ಯಡಿಯೂರಪ್ಪ ಅವರು, 'ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಲಿ. ಅವರಿಗೆ ಅಡ್ಡಿಪಡಿಸುವುದು ಸರಿಯಲ್ಲ. ಮಧ್ಯೆ ಯಾರು ಮಾತನಾಡಬೇಕು ಎಂದು ಆಡಳಿತ ಪಕ್ಷದ ಸದಸ್ಯರಿಗೆ ಸೂಚನೆ ನೀಡಿದ್ದರಿಂದ ಗದ್ದಲಕ್ಕೆ ಕೊನೆಯಾಯಿತು.
‘ತುಕಡೆ ತುಕಡೆ ಗ್ಯಾಂಗ್ ಯಾರು? ದಾಖಲೆ ಇದ್ದರೆ ಅವರನ್ನು ಕೂಡಲೇ ಬಂಧಿಸಿ. ನೀವು ಬೀದರ್ ಶಾಲೆಗೆ ಒಂದು ಕಾನೂನು ಮತ್ತು ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆ ಮತ್ತೊಂದು ಕಾನೂನು ಮಾಡಿದ್ದೀರಿ’
-ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್ ಸದಸ್ಯ