ನೂತನ ಸಚಿವರ ಪರಿಚಯ ಮಾಡಿಕೊಡಬೇಡಿ ಎಂದು ಬಿಎಸ್ವೈಗೆ ಸಿದ್ದರಾಮಯ್ಯ ಹೇಳಿದ್ದೇಕೆ ?
ಬೆಂಗಳೂರು, ಫೆ. 18: ‘ಆ ಮಂತ್ರಿಗಳೇ ಸದನದಲ್ಲಿ ಇಲ್ಲ. ಹೀಗಿರುವಾಗ ಯಾರನ್ನು ನೀವು ಸದನಕ್ಕೆ ಪರಿಚಯ ಮಾಡಿಕೊಡ್ತಿದ್ದೀರಿ. ಇಲ್ಲದವರ ಪರಿಚಯ ಮಾಡುವುದು ನಗೆಪಾಟಲಾಗುತ್ತದೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಿಎಂ ಬಿಎಸ್ವೈ ಕಾಲೆಳೆದ ಪ್ರಸಂಗ ನಡೆಯಿತು.
ಮಂಗಳವಾರ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿಎಂ ಸದನಕ್ಕೆ ಹೊಸ ಸಚಿವರ ಪರಿಚಯ ಮಾಡಿಕೊಡಲಿದ್ದಾರೆ ಎಂದರು. ಕೂಡಲೇ ಎದ್ದುನಿಂತ ಸಿಎಂ ಬಿಎಸ್ವೈ, ನೂತನ ಸಚಿವರಾದ ರಮೇಶ್ ಜಾರಕಿಹೊಳಿ, ಆನಂದ್ ಸಿಂಗ್, ಎಸ್.ಟಿ.ಸೋಮಶೇಖರ್ ಹೆಸರೇಳುತ್ತಿದ್ದರು. ಈ ವೇಳೆ ಮಧ್ಯಪ್ರವೇಶಿಸಿ ಸಿದ್ದರಾಮಯ್ಯ, ‘ಸದನದಲ್ಲಿ ಆ ಸಚಿವರೇ ಇಲ್ಲ. ಇಲ್ಲದ ಸಚಿವರನ್ನು ಯಾರಿಗೆ ಪರಿಚಯ ಮಾಡಿಕೊಡ್ತಿದ್ದೀರಿ’. ಅವರ ಪರಿಚಯ ಮಾಡುವ ಅಗತ್ಯ ಏನಿದೆ, ಅವರೆಲ್ಲಾ ನಮ್ಮ ಜೊತೆಗೆ ಇದ್ದವರು ಈಗ ಬಿಜೆಪಿಗೆ ಹೋಗಿದ್ದು, ನಮಗೆ ಅವರ ಪರಿಚಯ ಮಾಡಿಕೊಡುವ ಅಗತ್ಯ ಇಲ್ಲ’ ಎಂದು ಆಕ್ಷೇಪಿಸಿದರು.
ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ಸಿನ ಪ್ರಿಯಾಂಕ್ ಖರ್ಗೆ, ‘ಅವರನ್ನೆಲ್ಲ ನಿಮಗೆ ಪರಿಚಯ ಮಾಡಿಕೊಟ್ಟಿದ್ದೇ ನಾವು. ಅವರನ್ನು ನೀವು ನಮಗೆ ಪರಿಚಯ ಮಾಡುವ ಅಗತ್ಯವೇನೂ ಇಲ್ಲ’ ಎಂದರು. ಈ ಹಂತದಲ್ಲಿ ಪ್ರತಿಕ್ರಿಯಿಸಿದ ಸ್ಪೀಕರ್ ಕಾಗೇರಿ, ನಿಮಗೆ (ವಿಪಕ್ಷ) ಅವರ ಪರಿಚಯ ಇರಬಹುದು. ಆದರೆ, ಈ ಕಡೆ (ಆಡಳಿತ ಪಕ್ಷ) ಇರುವವರಿಗೆ ಅವರ ಪರಿಚಯ ಆಗಲಿ’ ಎಂದು ಚಟಾಕಿ ಹಾರಿಸಿದರು.
ಸದನಕ್ಕೆ ಮಂತ್ರಿಗಳ ಪರಿಚಯ ಮಾಡಿಕೊಡುವ ವೇಳೆ ಅವರು ಹಾಜರಿಲ್ಲದ ಕಾರಣಕ್ಕೆ ಮುಜುಗರಕ್ಕೆ ಒಳಗಾದ ಮುಖ್ಯಮಂತ್ರಿ ಯಡಿಯೂರಪ್ಪ, ಸದನದಲ್ಲಿ ಹಾಜರಿದ್ದ, ನೂತನ ಸಚಿವರಾದ ಶಿವರಾಮ್ ಹೆಬ್ಬಾರ್, ಬೈರತಿ ಬಸವರಾಜು ಸೇರಿ ಇನ್ನಿತರ ಹೆಸರನ್ನು ಹೇಳಿ ಸುಮ್ಮನಾದರು. ಈ ವೇಳೆ ಎದ್ದುನಿಂತ ಕಾಂಗ್ರೆಸಿನ ಹಿರಿಯ ಸದಸ್ಯ ರಾಮಲಿಂಗಾರೆಡ್ಡಿ, ನೂತನ ಸಚಿವರನ್ನು ಸದನಕ್ಕೆ ಸಿಎಂ ಯಡಿಯೂರಪ್ಪನವರು ಪರಿಚಯ ಮಾಡಿಕೊಡುತ್ತಿದ್ದಾರೆ. ಆದರೆ, ಆಡಳಿತ ಪಕ್ಷದ ಸದಸ್ಯರ ಯಾರೊಬ್ಬರ ಮುಖದಲ್ಲಿಯೂ ಖುಷಿಯೇ ಇಲ್ಲ ಎಂದು ಕಿಚಾಯಿಸಿದರು.