ಸರಕಾರ ರಚನೆಗೆ ಸಹಕರಿಸಿದವರ ಫೋಟೋಗಳಿಗೆ ಹಾರಹಾಕಿ ಪೂಜಿಸಬೇಕು: ಲೆಹರ್ ಸಿಂಗ್
ಬೆಂಗಳೂರು, ಫೆ. 18: ಸಮ್ಮಿಶ್ರ ಸರಕಾರದ ಅವಧಿಯಲ್ಲಿ ರಾಜೀನಾಮೆ ನೀಡಿ ಬಿಜೆಪಿ ಸರಕಾರ ರಚನೆಗೆ ಕಾರಣಕರ್ತರಾದ ಎಲ್ಲ 17 ಶಾಸಕರ ಫೋಟೋಗಳಿಗೂ ಹಾರಹಾಕಿ ಪೂಜಿಸಬೇಕು ಎಂದು ಬಿಜೆಪಿ ಸದಸ್ಯ ಲೆಹರ್ ಸಿಂಗ್ ಹೇಳಿದರು.
ಮಂಗಳವಾರ ವಿಧಾನಪರಿಷತ್ನಲ್ಲಿ ಊಟದ ವಿರಾಮದ ನಂತರದ ಕಲಾಪದಲ್ಲಿ ಗಮನ ಸೆಳೆದ ಅವರು, ಒಂದೂವರೆ ವರ್ಷದ ಅಪವಿತ್ರ ಮೈತ್ರಿ ಸರಕಾರ ಬೀಳಲು ಕಾರಣಕರ್ತರಾದವರಿಗೆ ಅಭಿನಂದಿಸುತ್ತೇನೆ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್-ಜೆಡಿಎಸ್ ಸದಸ್ಯರು, ನಿಮಗೆ ನಾಚಿಕೆಯಾಗಲ್ವ. ವಾಮ ಮಾರ್ಗದ ಮೂಲಕ ಸರಕಾರ ರಚನೆ ಮಾಡಿದ್ದು, ಅದನ್ನೇ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದೀರಾ ಎಂದು ಹೇಳಿದರು. ಈ ವೇಳೆ ಪ್ರತಿಕ್ರಿಯಿಸಿದ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ಜೀವಂತ ಇರುವವರ ಫೋಟೋಗೆ ಪೂಜೆ ಮಾಡಿದರೆ ನಮ್ಮಲ್ಲಿ ಬೇರೇನೆ ಅರ್ಥವಿದೆ ಎಂದು ವ್ಯಂಗ್ಯವಾಡಿದರು.
ಸಿಎಎ ವಿದೇಶದಿಂದ ಬರುವ ಮುಸ್ಲಿಮರಿಗೆ ಅನ್ವಯವಾಗಲಿದೆ. ಇಲ್ಲಿನ ಮುಸ್ಲಿಮರಿಗೆ ಸಮಸ್ಯೆಯಾಗಲ್ಲ. ನಮ್ಮ ಸರಕಾರ ಬಂದ ನಂತರ ಪ್ರವಾಹ ಬಂತು. 3 ಸಾವಿರ ಕೋಟಿ ರೂ. ಖರ್ಚು ಮಾಡಿದ್ದಾರೆ. ಸಿಎಂ ಬಿಎಸ್ವೈ ನೇತೃತ್ವದಲ್ಲಿ ಒಂದೊಂದು ಸಮಿತಿ ಮಾಡಬೇಕು. ಸಮರ್ಪಕ ಹಣ ಹಂಚಿಕೆಗೆ ಪ್ರಯತ್ನಿಸೋಣ ಎಂದು ಲೆಹರ್ ಸಿಂಗ್ ಹೇಳಿದರು.