ತಮ್ಮನ್ನು ರಕ್ಷಿಸಲು ಪೊಲೀಸರಿಂದ ಅಮಾಯಕರ ಮೇಲೆ ಆರೋಪ: ಐವನ್ ಡಿಸೋಜ
ಮಂಗಳೂರು ಗೋಲಿಬಾರ್ ಪ್ರಕರಣ
ಬೆಂಗಳೂರು, ಫೆ.18: ಪೊಲೀಸರು ತಮ್ಮನ್ನು ತಾವು ಬದುಕಿಸಿಕೊಳ್ಳಲು ಗೋಲಿಬಾರ್ನಲ್ಲಿ ಬಲಿಯಾದವರಿಗೆ ಆರೋಪದ ಪಟ್ಟ ಕಟ್ಟುತ್ತಿದ್ದಾರೆ ಎಂದು ಪರಿಷತ್ ಸದಸ್ಯ ಐವನ್ ಡಿಸೋಜ ಆರೋಪಿಸಿದ್ದಾರೆ.
ಮಂಗಳವಾರ ಪರಿಷತ್ತಿನಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಪ್ರಕರಣದಲ್ಲಿ ಇಬ್ಬರು ಅಮಾಯಕರು ಬಲಿಯಾಗಿದ್ದಾರೆ. ಆದರೆ, ಪೊಲೀಸರು ಪಾರಾಗಲು ಅವರ ಮೇಲೆ ಆರೋಪದ ಪಟ್ಟ ಕಟ್ಟಲು ಮುಂದಾಗಿದ್ದರು. ಇದು ಅತ್ಯಂತ ಅಮಾನವೀಯ ಕೆಲಸ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ, ಉಸ್ತುವಾರಿ ಸಚಿವ, ಸ್ಥಳೀಯ ಶಾಸಕ, ಸಂಸದ ಎಲ್ಲರೂ ಬಿಜೆಪಿಯವರೇ ಆಗಿದ್ದಾರೆ. ಆದರೆ, ಗೋಲಿಬಾರ್ನಲ್ಲಿ ಮೃತಪಟ್ಟವರ ಮನೆಗೆ ಭೇಟಿಯಾಗಲು ಸಾಧ್ಯವಾಗಿಲ್ಲ. ಅಲ್ಲದೆ, ಸತ್ತವರ ಕುಟುಂಬಕ್ಕೆ ಪರಿಹಾರ ಚೆಕ್ ನೀಡ್ತೀನಿ ಎಂದು ಕರೆಸಿಕೊಂಡು, ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ ಎಂದು ಅವರು ದೂರಿದರು.
ಮಂಗಳೂರಿನಲ್ಲಿ ನಡೆದ ಘಟನೆಗೆ ನೆರೆ ರಾಜ್ಯ ಕೇರಳದಿಂದ ಬಂದವರು ಕಾರಣ ಎಂದು ಹೇಳುತ್ತಿದ್ದಾರೆ. ಆದರೆ, ಇದುವರೆಗೂ ಕೇರಳದ ಯಾರೊಬ್ಬರನ್ನು ಬಂಧಿಸಿಲ್ಲ ಎಂದ ಅವರು, ಸಿಎಎ, ಎನ್ಆರ್ಸಿ ವಿರುದ್ಧ ಮಾತನಾಡುವ ಎಲ್ಲರನ್ನು ದೇಶದ್ರೋಹಿ ಎನ್ನುವುದು ಸರಿಯಲ್ಲ ಎಂದು ನುಡಿದರು.