ವಿಚಾರಣಾಧೀನ ಕೈದಿ ಪರಾರಿ: ಮೂವರು ಪೊಲೀಸರ ಅಮಾನತು
ಕಲಬುರ್ಗಿ, ಫೆ.18: ಕಳವು ಆರೋಪದಡಿ ಬಂಧಿತನಾಗಿದ್ದ ವಿಚಾರಣಾಧೀನ ಕೈದಿ ಆಸ್ಪತ್ರೆಯಿಂದ ಪರಾರಿಯಾಗಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಮೂವರು ಪೊಲೀಸ್ ಪೇದೆಗಳನ್ನು ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ.
ಕರ್ತವ್ಯಲೋಪ ಆರೋಪದಡಿ ಪೊಲೀಸ್ ಪೇದೆಗಳಾದ ಮಡಿವಾಳಪ್ಪ, ವೀರಭದ್ರಯ್ಯ ಮತ್ತು ಗೌಡಪ್ಪಎಂಬುವವರನ್ನು ಅಮಾನತು ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳ್ಳತನ ಆರೋಪ ಹೊತ್ತಿದ್ದ ಚಿಂಚೋಳಿ ಪಟ್ಟಣ ನಿವಾಸಿ ಮುಝೀಬ್ (25) ಅನಾರೋಗ್ಯದ ಹಿನ್ನೆಲೆ ಮೂರು ದಿನಗಳಿಂದ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ. ಸೋಮವಾರ ಪೊಲೀಸರ ಕಣ್ಣುತಪ್ಪಿಸಿ ಜಿಲ್ಲಾಸ್ಪತ್ರೆಯ ವಾರ್ಡಿನಿಂದ ತಪ್ಪಿಸಿದ್ದಾನೆ ಎನ್ನಲಾಗಿದೆ. ಕರ್ತವ್ಯ ನಿಯೋಜಿತ ಪೊಲೀಸ್ ಸಿಬ್ಬಂದಿ ನಿರ್ಲಕ್ಷದಿಂದ ಘಟನೆ ನಡೆದಿದೆ ಎಂಬ ಕಾರಣದಿಂದ ಮೂವರನ್ನೂ ಅಮಾನತು ಮಾಡಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
ಈ ಸಂಬಂಧ ಬ್ರಹ್ಮಪೂರ ಠಾಣೆಯಲ್ಲಿ ಪರಾರಿಯಾದ ಕೈದಿ ಮುಝೀಬ್ ವಿರುದ್ಧ ಪ್ರಕರಣ ದಾಖಲಾಗಿದೆ.
Next Story