50 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ: ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಮುಂದಾದ ಬಿಬಿಎಂಪಿ
ಬೆಂಗಳೂರು ಫೆ.18: ನಗರದ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಅವುಗಳ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಲು ಬಿಬಿಎಂಪಿ ಮುಂದಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸೆಂಟ್ರಲ್ ಲೈಬ್ರರಿ, ಕೆ.ಆರ್. ಮಾರುಕಟ್ಟೆ, ಜಾನ್ಸನ್ ಮಾರ್ಕೆಟ್, ಟಿಪ್ಪು ಸುಲ್ತಾನ್ ಅರಮನೆ ಮತ್ತು ಶಸ್ತ್ರಾಸ್ತ್ರ ಕಾರ್ಯಾಗಾರ, ವಿಧಾನಸೌಧ, ಕನ್ನಡ ಸಾಹಿತ್ಯ ಪರಿಷತ್, ಮೇಯೋ ಹಾಲ್, ಟೌನ್ ಹಾಲ್, ಸೆಂಟ್ರಲ್ ಕಾಲೇಜು ಸೇರಿದಂತೆ ಇನ್ನಿತರ ಪಾರಂಪರಿಕ ಕಟ್ಟಡಗಳು ಹಾಳಾಗದಂತೆ ಸಂರಕ್ಷಿಸುವುದು ಹಾಗೂ ಈಗಾಗಲೆ ಹಾಳಾಗಿರುವ ಪಾರಂಪರಿಕ ಕಟ್ಟಡಗಳನ್ನು ನವೀಕರಣಗೊಳಿಸಿ ಯಥಾಸ್ಥಿತಿ ಕಾಪಾಡುವ ಉದ್ದೇಶವನ್ನು ಈ ಸಮಿತಿ ಹೊಂದಿದ್ದು, ಇದಕ್ಕಾಗಿ 50 ಕೋಟಿ ರೂ. ಅನುದಾನ ನೀಡುವಂತೆ ಕೋರಿ ರಾಜ್ಯ ಸರಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ.
ಹಲವು ಇಲಾಖೆಗಳ ತಜ್ಞರನ್ನು ಒಳಗೊಂಡಿರುವ ಈ ಸಮಿತಿಯಲ್ಲಿ ಬಿಬಿಎಂಪಿ ಆಯುಕ್ತರೇ ಸಮಿತಿಯ ಅಧ್ಯಕ್ಷರಾಗಿರಲಿದ್ದಾರೆ. ಇನ್ನುಳಿದಂತೆ ಕನಿಷ್ಠ 10 ವರ್ಷ ಅನುಭವ ಹೊಂದಿರುವ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ನ ಸದಸ್ಯರು, ಸ್ಟ್ರೆಕ್ಚರ್ ಇಂಜಿನಿಯರ್ ಮತ್ತು ಪಾರಂಪರಿಕ ಕಟ್ಟಡಗಳ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ, 10 ವರ್ಷ ಅನುಭವವಿರುವ ಹಾಗೂ ವಾಸ್ತುಶಿಲ್ಪಿ ಕೌನ್ಸಿಲ್ನ ಸದಸ್ಯತ್ವ ಪಡೆದಿರುವ ವಾಸ್ತುಶಿಲ್ಪ ತಜ್ಞರು ಈ ಸಮಿತಿಯಲ್ಲಿರಲಿದ್ದಾರೆ.