ನಾವು ನಿಮ್ಮಷ್ಟು ಬುದ್ಧಿವಂತರಲ್ಲ ಬಿಡಿ: ಸುರೇಶ್ ಕುಮಾರ್ ಕಾಲೆಳೆದ ಸಿದ್ದರಾಮಯ್ಯ
ಬೆಂಗಳೂರು, ಫೆ. 21: ‘ಶಾಲೆ ಮತ್ತು ಕೊಠಡಿಗಳ ವ್ಯತ್ಯಾಸ ನಮಗೆ ಗೊತ್ತಾಗುವುದಿಲ್ಲ. ಅಲ್ಲದೆ, ನಾವು ನಿಮ್ಮಷ್ಟು ಬುದ್ಧಿವಂತರೂ ಅಲ್ಲ ಬಿಡಿ’ ಹೀಗೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರ ಕಾಲೆಳೆದ ಪ್ರಸಂಗಕ್ಕೆ ವಿಧಾನಸಭೆ ಸಾಕ್ಷಿಯಾಯಿತು.
ಗುರುವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡುತ್ತಾ ಸಿದ್ದರಾಮಯ್ಯ, ನೆರೆ ಪೀಡಿತ ಪ್ರದೇಶಗಳಲ್ಲಿ ಶಾಲಾ ಕಟ್ಟಡ ನಿರ್ಮಾಣ ಇನ್ನೂ ಆಗಿಲ್ಲ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುರೇಶ್ ಕುಮಾರ್, ಶಾಲೆಗಳಲ್ಲ, ಕೊಠಡಿಗಳು ಎಂದು ಸ್ಪಷ್ಟನೆ ನೀಡಿದರು.
ನಿಮ್ಮದು 3 ಸಾವಿರ ವರ್ಷಗಳ ಇತಿಹಾಸ: ಬುದ್ಧಿವಂತರ ಬಗ್ಗೆ ಜೆ.ಎಚ್. ಪಟೇಲ್ ಒಂದು ಮಾತು ಹೇಳಿದ್ದರು. ರಾಮಕೃಷ್ಣ ಹೆಗ್ಡೆ ಮುಖ್ಯಮಂತ್ರಿ ಆಗಿದ್ದ ವೇಳೆ ಸಭೆಯೊಂದರಲ್ಲಿ ಪಟೇಲ್, ಬಿ.ರಾಚಯ್ಯ ಅವರಿಗೆ, ‘ಹೆಗ್ಡೆಯವರಿಗೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ನಮ್ಮದು 12ನೆ ಶತಮಾನದಿಂದ ಸೃಷ್ಟಿಯಾಗಿದೆ. ನಿಮಗೆ ಸಂವಿಧಾನ ಜಾರಿಯಾದ ಮೇಲೆ ನಿಮ್ಮ ಇತಿಹಾಸ ಆರಂಭವಾಗಿದೆ’ ಎಂದಿದ್ದರು. ಹೀಗಾಗಿ ಸುರೇಶ್ ಕುಮಾರ್ ಮತ್ತು ರಮೇಶ್ ಕುಮಾರ್ ಅವರಷ್ಟು ಬುದ್ಧಿವಂತರಾಗಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಉಲ್ಲೇಖಿಸಿದ್ದು ಸದನದಲ್ಲಿ ನಗೆ ಅಲೆಯನ್ನು ಉಕ್ಕಿಸಿತು.