ಮಧುಮೇಹಕ್ಕೆ ಆರೋಗ್ಯ ಮಿಷನ್ ಅಡಿ ಚಿಕಿತ್ಸೆಗೆ ಕ್ರಮ: ಅಶ್ವಥ್ ನಾರಾಯಣ
ಬೆಂಗಳೂರು, ಮಾ.1: ಮಧುಮೇಹ(ಟೈಪ್1) ಸಮಸ್ಯೆಗೆ ಹೆಲ್ತ್ ಮಿಷನ್ ಅಡಿಯಲ್ಲಿ ಇನ್ಸುಲಿನ್ ಕೊಡಿಸುವ ಬಗ್ಗೆ ಪ್ರಯತ್ನಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಹೇಳಿದ್ದಾರೆ.
ರವಿವಾರ ನಗರದಲ್ಲಿ ಮಧುಮೇಹ ಜಾಗೃತಿ ಫೌಂಡೇಷನ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಟೈಪ್ 1ರ ಮಧುಮೇಹ ಕುರಿತಂತೆ ಇನ್ನಷ್ಟು ಪರಿಣಾಮಕಾರಿ ಸರ್ವೇ ಕಾರ್ಯಗಳು ನಡೆದು ಮಾಹಿತಿ ಸಂಗ್ರಹಿಸುವ ಕೆಲಸ ಆಗಬೇಕಿದೆ. ಮಾಹಿತಿ ಸಂಗ್ರಹಿಸಿ ಡಿಜಿಟಲೀಕರಣಗೊಳಿಸಬೇಕು. ಅದರ ಆಧಾರದ ಮೇಲೆ ಸೂಕ್ತ ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಪ್ರಸ್ತುತ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಮಧುಮೇಹ ರೋಗ ಬರುವುದಿಲ್ಲ. ಹೀಗಾಗಿ ಆರೋಗ್ಯ ಮಿಷನ್ ಅಡಿಯಲ್ಲಿ ಸೇರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಮಧುಮೇಹ ಎಂಬುದು ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಸವಾಲಾಗಿದೆ. ಈ ಕುರಿತು ಚಿಕಿತ್ಸೆಗೂ ಹೆಚ್ಚಾಗಿ ಜಾಗೃತಿಗೆ ಆದ್ಯತೆ ನೀಡಬೇಕಾಗಿದೆ ಎಂದು ಅವರು ತಿಳಿಸಿದರು.
ಮಧುಮೇಹದಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ಕೊಡಿಸುವುದರ ಜತೆಗೆ ಆ ಸಮಸ್ಯೆಯಿಂದ ನೊಂದ ಕುಟುಂಬಗಳಿಗೆ ಧೈರ್ಯ ತುಂಬುವ ಕೆಲಸ ಆಗಬೇಕಿದ್ದು, ಈ ನಿಟ್ಟಿನಲ್ಲಿ ಸರಕಾರೇತರ ಸಂಘಟನೆಗಳು ಕೆಲಸ ಮಾಡಬೇಕು. ಮಧುಮೇಹಕ್ಕೆ ಸಾಕಷ್ಟು ಔಷಧ ಇದ್ದರೂ ಅದರಿಂದ ಪೂರ್ಣ ಗುಣಮುಖರಾಗುವತ್ತ ಸಂಶೋಧನೆಗಳು ಆಗಬೇಕಿದೆ. ವಿದೇಶಗಳಲ್ಲಿ ಮಾತ್ರವಲ್ಲ, ದೇಶೀಯ ಸಂಶೋಧನೆಗಳೂ ಈ ನಿಟ್ಟಿನಲ್ಲಿ ನಡೆಯಬೇಕು. ಅದಕ್ಕೆ ಸರಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಅವರು ಅಭಿಪ್ರಾಯಿಸಿದರು.