ಸದನದಲ್ಲಿ 'ವಾರ್ತಾಭಾರತಿ' ವರದಿ ಉಲ್ಲೇಖಿಸಿದ ವಿಧಾನ ಪರಿಷತ್ ವಿಪಕ್ಷ ನಾಯಕ ಪಾಟೀಲ್
ಬೆಂಗಳೂರು, ಮಾ. 3: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಕುರಿತು ಬಸನಗೌಡ ಯತ್ನಾಳ್ ನೀಡಿರುವ ಹೇಳಿಕೆಯು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಮಾಡಿದ ಅವಮಾನ. ಅಲ್ಲದೆ, ಸಂವಿಧಾನಕ್ಕೆ ಮಾಡಿದ ಅಪಮಾನವಾಗಿದೆ ಎಂದು ವಿಧಾನಪರಿಷತ್ನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಪರಿಷತ್ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುರಿತು ನಿಯಮ 342 ಅಡಿಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, 1942-43 ಅವಧಿಯಲ್ಲಿ ಸುಮಾರು ಒಂದು ವರ್ಷ ಕಾಲ ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆಯಲ್ಲಿ ಜೈಲುವಾಸ ಅನುಭವಿಸಿದ್ದಾರೆ. ಈ ಕುರಿತು ದಾಖಲೆಗಳಿವೆ. ಅಲ್ಲದೆ, ದೊರೆಸ್ವಾಮಿಯು ಗಾಂಧೀಯವರ ಕೊನೆಯ ಕೊಂಡಿಯಾಗಿದ್ದಾರೆ. ಅಂಥವರನ್ನು ಅವಮಾನಿಸಿದ್ದು ಸಲ್ಲ ಎಂದು ಹೇಳಿದರು.
ಶಾಸಕರಾಗಿ, ಸಚಿವರಾಗಿ, ಪರಿಷತ್ ಸದಸ್ಯರಾಗಿ ನಾವೆಲ್ಲಾ ಸಂವಿಧಾನವನ್ನು ಎತ್ತಿ ಹಿಡಿಯುವುದಾಗಿ ಪ್ರತಿಜ್ಞೆ ಸ್ವೀಕರಿಸಿದ್ದೇವೆ. ಆದರೆ, ಅದೇ ಸಂವಿಧಾನಕ್ಕೆ ಅಪಮಾನ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ. ಯತ್ನಾಳ್ ಅವರ ಹೇಳಿಕೆ ಖಂಡನೀಯ. ಇಂಥ ಹೇಳಿಕೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ಬಿಜೆಪಿ ನಾಯಕರು ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.
ನಮ್ಮದು ವಿಶ್ವದಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ಎನ್ನುವ ಹಿರಿಮೆಗೆ ಪಾತ್ರವಾಗಿರುವ ದೇಶ. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಬಿಜೆಪಿಗರು ಅತ್ಯಂತ ಲಘುವಾಗಿ ತಿಳಿದುಕೊಂಡಿದ್ದಾರೆ. ಬ್ರಿಟಿಷರ ದಾಸ್ಯ, ಸಂಕೋಲೆಗಳಿಂದ ಬಿಡಿಸಲು ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ನಮ್ಮ ಪೂರ್ವಜರೇ ಅದರಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ ಎಂದ ಅವರು, ಕಾಂಗ್ರೆಸಿಗರ ಕಣ ಕಣದಲ್ಲಿಯೂ ಸ್ವಾತಂತ್ರ್ಯ ಹೋರಾಟದ ಕೆಚ್ಚಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿಯವರ ಮುಂದಾಳತ್ವದಲ್ಲಿ ಜಾತಿ, ಮತ, ಧರ್ಮ ಮೀರಿ ಜನರು ಬ್ರಿಟೀಷರ ಗುಂಡಿಗೆ ಎದೆಯೊಡ್ಡಿ ನಿಂತಿದ್ದಾರೆ. ಆರೂವರೆ ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅವರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ ಎಂದು ಹೇಳಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಆಡಳಿತ ಪಕ್ಷದ ಸದಸ್ಯ ವೈ.ಎ. ನಾರಾಯಣಸ್ವಾಮಿ ಹಾಗೂ ತೇಜಸ್ವಿನಿ, 'ದೊರೆಸ್ವಾಮಿ ಅವರು ಸಾವರ್ಕರ್ರನ್ನು ಹೇಡಿ ಎಂದು ಕರೆದಿದ್ದಾರೆ, ಇದು ಸರಿಯೇ ಎಂದು ಪ್ರಶ್ನಿಸಿದರು.
ಅನಂತರ ಮಾತು ಮುಂದುವರಿಸಿದ ಪಾಟೀಲ್, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡವರ ಬಗ್ಗೆ ಕಿಂಚಿತ್ತೂ ಗೌರವವಿಲ್ಲ. ಆದರೆ, ಅವರ ಬಗ್ಗೆ ಮಾತನಾಡುವ ವೇಳೆ ಕೇಳಿಸಿಕೊಳ್ಳುವ ಸೌಜನ್ಯವನ್ನಾದರೂ ತಾಳಿ. ಹಿರಿಯರನ್ನು ಪಾಕಿಸ್ತಾನದ ಏಜೆಂಟ್ ಎಂದೆಲ್ಲಾ ಜರೆದಿರುವುದು ಅಷ್ಟು ಒಳ್ಳೆಯದಲ್ಲ. ಇದು ಪ್ರಜಾಪ್ರಭುತ್ವಕ್ಕೆ ವ್ಯತಿರಿಕ್ತವಾದುದಾಗಿದೆ ಎಂದರು.
'ವಾರ್ತಾಭಾರತಿ' ವರದಿ ಉಲ್ಲೇಖಿಸಿದ ಪಾಟೀಲ್
‘ಶಾಸಕ ಯತ್ನಾಳ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಧರಣಿ’ ಎಂಬ ಅಡಿಬರಹದೊಂದಿಗೆ ಫೆ.28 ರಂದು ವಾರ್ತಾಭಾರತಿ ಪ್ರಕಟಿಸಿದ್ದ ವರದಿಯನ್ನು ಉಲ್ಲೇಖಿಸಿದ ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ದೊರೆಸ್ವಾಮಿ ಬಗ್ಗೆ ಅಪಮಾನಕರವಾಗಿ ಮಾತನಾಡಿರುವ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾಹಿತಿಗಳು, ಚಿಂತಕರು, ಪ್ರಗತಿಪರರು ನಡೆಸುತ್ತಿರುವ ಹೋರಾಟವನ್ನು ಸಭಾಪತಿ ಗಮನಕ್ಕೆ ತಂದರು.