ಸಿಎಎ-ಎನ್ಪಿಆರ್-ಎನ್ಆರ್ಸಿ ಬಹಿಷ್ಕಾರಕ್ಕೆ ಎಸ್ಡಿಪಿಐ ಕರೆ
ಬೆಂಗಳೂರು, ಮಾ.15: ರಾಜ್ಯ ಸರಕಾರ ಕರ್ನಾಟಕದಲ್ಲಿ ಯಾವುದೆ ಕಾರಣಕ್ಕೂ ಸಿಎಎ, ಎನ್ಪಿಆರ್, ಎನ್ಆರ್ಸಿ ಜಾರಿಗೊಳಿಸಬಾರದು ಎಂದು ಆಗ್ರಹಿಸಿ ರಾಜ್ಯಾದ್ಯಂತ ಈಗಾಗಲೆ ಹೋರಾಟಗಳು ನಿರಂತರವಾಗಿ ನಡೆಯುತ್ತಿದೆ. ಹೀಗಿದ್ದರೂ ಮುಂಬರುವ ಎಪ್ರಿಲ್ 15ರಿಂದ ರಾಜ್ಯಾದ್ಯಂತ ಎನ್ಪಿಆರ್ ಸರ್ವೆ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಎಸ್ಡಿಪಿಐ ರಾಜ್ಯಾಧ್ಯಕ್ಷ ಮುಹಮ್ಮದ್ ಇಲ್ಯಾಸ್ ತುಂಬೆ ತಿಳಿಸಿದ್ದಾರೆ.
ರವಿವಾರ ನಗರದ ಕಬ್ಬನ್ಪೇಟೆ ಮುಖ್ಯರಸ್ತೆಯಲ್ಲಿರುವ ಹಮೀದ್ ಷಾ ಕಾಂಪ್ಲೆಕ್ಸ್ನಲ್ಲಿರುವ ಎಸ್ಡಿಪಿಐ ಕಚೇರಿಯಲ್ಲಿ ಆಯೋಜಿಸಲಾಗಿದ್ದ ‘ಸಂವಿಧಾನ ಸಂರಕ್ಷಣಾ ಆಂದೋಲನ’ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಎನ್ಪಿಆರ್ ಎಂಬುವುದು ಎನ್ಆರ್ಸಿಯ ಹಿಂಬಾಗಿಲು ಎಂಬುವುದು ಕಹಿ ಸತ್ಯ. ಒಟ್ಟಾರೆ ಪೌರತ್ವ ತಿದ್ದುಪಡಿ ಕಾಯಿದೆ ಸಂವಿಧಾನ ವಿರೋಧಿಯಾಗಿದೆ. ಇದನ್ನು ಜಾತ್ಯತೀತ ರಾಷ್ಟ್ರವಾದ ನಮ್ಮ ಭಾರತ ಒಪ್ಪಲು ಸಾಧ್ಯವಿಲ್ಲ. ಆದುದರಿಂದ ನಾವೆಲ್ಲರೂ ಒಗ್ಗೂಡಿ ಈ ಸಿಎಎ, ಎನ್ಪಿಆರ್, ಎನ್ಆರ್ಸಿಯನ್ನು ಬಹಿಷ್ಕಾರ ಮಾಡಬೇಕಿದೆ ಎಂದು ಅವರು ಕರೆ ನೀಡಿದರು.
ಸಂವಿಧಾನ ಸಂರಕ್ಷಣಾ ಆಂದೋಲನದ ಹೆಸರಿನಡಿಯಲ್ಲಿ ರಾಜ್ಯಾದ್ಯಂತ ಮನೆ-ಮನೆಗೆ ಹೋಗಿ ಎನ್ಪಿಆರ್ ಹೇಗೆ ಜನ ವಿರೋಧಿಯಾಗಿದೆ ಎಂಬುದರ ಕುರಿತು ಜಾಗೃತಿ ಮೂಡಿಸಲಾಗುವುದು. ಮೊಹಲ್ಲಾ ಸಭೆಗಳು ಮಾಡಲಾಗುವುದು. ಅಗತ್ಯಕ್ಕೆ ಅನುಸಾರವಾಗಿ ಹೋರಾಟಗಳನ್ನು ರೂಪಿಸಲಾಗುವುದು. ಈ ಜನಪರ ಆಂದೋಲನವನ್ನು ಪಕ್ಷಾತೀತವಾಗಿ ಮಾಡಬೇಕು ಎಂದು ಇಲ್ಯಾಸ್ ತುಂಬೆ ತಿಳಿಸಿದರು.
ಎಸ್ಡಿಪಿಐ ರಾಷ್ಟ್ರೀಯ ಮುಖಂಡ ಡಾ.ಅವಾದ್ ಶರೀಫ್ ಮಾತನಾಡಿ, ಈಗಾಗಲೆ ರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರಮಟ್ಟದ ಹಲವಾರು ಪ್ರಗತಿಪರ ಸಂಘಟನೆಗಳ ಪಧಾದಿಕಾರಿಗಳ ಸಹಯೋಗದಲ್ಲಿ ‘ಸಂವಿಧಾನ ಸಂರಕ್ಷಣಾ ಆಂದೋಲನ’ ಎಂಬ ವೇದಿಕೆ ಮಾಡಲಾಗಿದ್ದು, ಇದರಡಿಯಲ್ಲಿ ಅನೇಕ ಕಾರ್ಯಾಗಾರಗಳನ್ನು ಮಾಡಲಾಗಿದೆ ಎಂದರು.
ಇದರ ಪರಿಣಾಮವಾಗಿ ಜನಸಾಮಾನ್ಯರು ದೇಶದ್ಯಾಂತ ಸಿಎಎ, ಎನ್ಪಿಆರ್ ಹಾಗೂ ಎನ್ಆರ್ಸಿ ಬಹಿಷ್ಕರಿಸಲು ಮಾನಸಿಕವಾಗಿ ಸಿದ್ಧವಾಗಿದ್ದಾರೆ. ಇಷ್ಟಿದರೂ ನಮ್ಮ ಹೋರಾಟ ಮುಂದುವರಿಸಬೇಕಾಗಿದೆ. ಎಲ್ಲಿಯವರೆಗೆ ಅಂದರೆ ಸರಕಾರ ಅಧಿಕೃತವಾಗಿ ಸಿಎಎ, ಎನ್ಪಿಆರ್ ಹಾಗೂ ಎನ್ಆರ್ಸಿಯನ್ನು ಹಿಂಪಡೆಯುವವರೆಗೂ ನಾವು ಪಕ್ಷಾತೀತವಾಗಿ ಹೋರಾಟವನ್ನು ಮಾಡಬೇಕು ಎಂದು ಒತ್ತಿ ಹೇಳಿದರು.
ಕಾರ್ಯಗಾರದಲ್ಲಿ ಎಸ್ಡಿಪಿಐ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹನ್ನಾನ್, ರಾಜ್ಯ ನಾಯಕರು, ಪಕ್ಷದ ಜಿಲ್ಲಾ ಅಧ್ಯಕ್ಷರು, ಕಾರ್ಯದರ್ಶಿಗಳು, ಸಂಪನ್ಮೂಲ ವ್ಯಕ್ತಿಗಳು ಹಾಜರಿದ್ದರು.