ಆರ್.ಆರ್.ನಗರ ಚುನಾವಣಾ ತಕರಾರು ಅರ್ಜಿ ವಜಾಕ್ಕೆ ಹೈಕೋರ್ಟ್ ನಕಾರ
ಬೆಂಗಳೂರು, ಮಾ.20: ಆರ್.ಆರ್.ನಗರ ಕ್ಷೇತ್ರದ ಚುನಾವಣಾ ತಕರಾರು ಅರ್ಜಿಯನ್ನು ವಜಾಗೊಳಿಸಲು ನಿರಾಕರಿಸಿರುವ ಹೈಕೋರ್ಟ್ ಮುನಿರತ್ನ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ವಜಾಗೊಳಿಸಿ, ತಕರಾರು ಅರ್ಜಿ ವಿಚಾರಣೆಯನ್ನು ಎ.14ಕ್ಕೆ ಮುಂದೂಡಿದೆ.
ಶಾಸಕ ಮುನಿರತ್ನ ಅವರು ನಕಲಿ ಓಟರ್ ಐಡಿ ಕಾರ್ಡ್ಗಳನ್ನು ಸಂಗ್ರಹಿಸಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸಿ ತಮ್ಮನ್ನು ವಿಜಯಿಯೆಂದು ಘೋಷಿಸುವಂತೆ ಕೋರಿ ಬಿಜೆಪಿ ಪರಾಜಿತ ಅಭ್ಯರ್ಥಿ ಪಿ.ಎಂ.ಮುನಿರಾಜುಗೌಡ ಸಲ್ಲಿಸಿದ್ದ ಮನವಿಯನ್ನು ರದ್ದುಗೊಳಿಸಿ ಕಲಬುರಗಿ ನ್ಯಾಯಪೀಠದಿಂದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ವಿಡಿಯೋ ಕಾನ್ಫರೆನ್ಸ್ ಮೂಲಕ ಆದೇಶ ಹೊರಡಿಸಿದೆ. ಕಳೆದ 2018ರ ಮೇ 28ರಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಚುನಾವಣೆ ನಡೆದಿತ್ತು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುನಿರತ್ನ ಗೆದ್ದಿದ್ದರು. 2018ರ ಮೇ 9ರಂದು ಜಾಲಹಳ್ಳಿಯ ಫ್ಲಾಟ್ ಒಂದರಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ 10 ಸಾವಿರ ವೋಟರ್ ಐಡಿಗಳು ಪತ್ತೆಯಾಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಸೇರಿ 10 ಜನರ ವಿರುದ್ಧ ಮುಖ್ಯ ಚುನಾವಣಾ ಅಧಿಕಾರಿಗಳು ದೂರು ದಾಖಲಿಸಿದ್ದಾರೆ ಎಂದು ಅರ್ಜಿಯಲ್ಲಿ ಪರಾಜಿತ ಅಭ್ಯರ್ಥಿ ಮುನಿರಾಜುಗೌಡ ಆರೋಪಿಸಿದ್ದರು.