ಮಾಸ್ಕ್ ಧರಿಸಿ ಕಲಾಪದಲ್ಲಿ ಪಾಲ್ಗೊಂಡ ಸಿದ್ದರಾಮಯ್ಯ ಸೇರಿ ಹಲವು ಸದಸ್ಯರು
ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ‘ಕೊರೋನ ವೈರಸ್’
ಬೆಂಗಳೂರು, ಮಾ. 23: ಮಾರಣಾಂತಿಕ ಕೊರೋನ ವೈರಸ್ ಸೋಂಕಿನ ವಿಚಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಈ ವೇಳೆ ಅಧಿವೇಶನ ಮುಂದೂಡಲು ಒತ್ತಾಯಿಸಿದರೆ, ಮತ್ತೊಂದೆಡೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಹಲವು ಸದಸ್ಯರು ಮುಖಕ್ಕೆ ಮಾಸ್ಕ್ ಧರಿಸಿಯೇ ಕಲಾಪದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಸೋಮವಾರ ನಿಗದಿಯಂತೆ ಬೆಳಗ್ಗೆ 11:10ಕ್ಕೆ ಕಲಾಪ ಸಮಾವೇಶನಗೊಂಡಿತು. ಈ ವೇಳೆ ಸ್ಪೀಕರ್, ಕೊರೋನ ವೈರಸ್ ತಡೆಗಟ್ಟುವ ದೃಷ್ಟಿಯಿಂದ ಪ್ರಧಾನಿ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂವನ್ನು ರಾಜ್ಯದ ಜನತೆ ಯಶಸ್ವಿಗೊಳಿಸಿದ್ದು, ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಕೊರೋನ ವೈರಸ್ ಸೋಂಕಿನ ಬಗ್ಗೆ ಜನರಲ್ಲಿನ ಆತಂಕ ದೂರ ಮಾಡಬೇಕಿದೆ. ಆ ನಿಟ್ಟಿನಲ್ಲಿ ರಾಜ್ಯ ಸರಕಾರ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳನ್ನು ಎಲ್ಲರೂ ಪಾಲಿಸಬೇಕು. ಇದು ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯೂ ಹೌದು ಎಂದು ಸ್ಪೀಕರ್ ಸೂಚಿಸಿ, ಬಳಿಕ ಪ್ರಶ್ನೋತ್ತರವನ್ನು ಕೈಗೆತ್ತಿಕೊಂಡರು.
ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ನ ಆರ್.ವಿ.ದೇಶಪಾಂಡೆ ಮತ್ತು ಎಚ್.ಕೆ. ಪಾಟೀಲ್, ಕೊರೋನ ವೈರಸ್ ರಾಜ್ಯದಲ್ಲಿ ಮಿತಿಮೀರುತ್ತಿದೆ. 9 ಜಿಲ್ಲೆಗಳ ಲಾಕ್ ಡೌನ್ ಮಾಡಿದ್ದು, ಈ ವೇಳೆ ಅಧಿವೇಶನ ಕಲಾಪ ನಡೆಸುವುದು ರಾಜ್ಯದ ಜನತೆಗೆ ತಪ್ಪು ಸಂದೇಶ ನೀಡಿದಂತೆ. ಹೀಗಾಗಿ ಕಲಾಪ ಮುಂದೂಡಬೇಕೆಂದು ಆಗ್ರಹಿಸಿದರು.
ರಾಜ್ಯಕ್ಕೆ ವಿದೇಶಗಳಿಂದ 30ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದಾರೆ. ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದಾಗ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಸದಸ್ಯರು ಒತ್ತಾಯಿಸಿದರು. ಈ ವೇಳೆ ಎದ್ದುನಿಂತ ಸಚಿವ ಮಾಧುಸ್ವಾಮಿ, ಕೊರೋನ ಸೋಂಕಿನ ವಿಚಾರ ಸದನದಲ್ಲಿ ಚರ್ಚೆಯಾಗಿದೆ. ಯಾವುದೇ ನೋಟಿಸ್ ನೀಡದೆ ಮತ್ತೆ ಮತ್ತೆ ಅದೇ ವಿಚಾರ ಪ್ರಸ್ತಾಪ ಸರಿಯಲ್ಲ ಎಂದು ಆಕ್ಷೇಪಿಸಿದರು.
ರಾಜ್ಯದಲ್ಲಿ ದಿನಗೂಲಿ ನೌಕರರು, ಕ್ಯಾಬ್, ಆಟೋರಿಕ್ಷಾ ಚಾಲಕರು ಸೇರಿ ಜನರು ಸಮಸ್ಯೆಗೆ ಸಿಲುಕಿದಾಗ ಚರ್ಚೆ ಮಾಡಬೇಕಾಗುತ್ತದೆ. ಅಧಿವೇಶನದಲ್ಲಿ ಮಾತನಾಡದೆ ಹೊರಗೆ ಎಲ್ಲಿ ಮಾತನಾಡಲು ಸಾಧ್ಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಷಯ ಚರ್ಚೆಗೆ ಪಟ್ಟುಹಿಡಿದರು.
ಕೊರೋನ ವಿಚಾರ ಅತ್ಯಂತ ಗಂಭೀರ. ಈ ವಿಷಯ ಚರ್ಚೆಗೆ ಯಾರದ್ದು ತಕರಾರಿಲ್ಲ. ಆದರೆ, ಮೊದಲೇ ನೋಟಿಸ್ ನೀಡಬೇಕು. ನಿಯಮಗಳನ್ವಯ ಸದನ ನಡೆಸಬೇಕಾಗುತ್ತದೆ. ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಲು ನೋಟಿಸ್ ನೀಡಬೇಕು ಎಂದು ಸ್ಪೀಕರ್ ರೂಲಿಂಗ್ ನೀಡಿ ವಿಷಯ ಚರ್ಚೆಗೆ ನಿರಾಕರಿಸಿದರು.
ಮಾಸ್ಕ್ ಧರಿಸಿ ಬಂದ ಸಿದ್ದರಾಮಯ್ಯ: ಕೊರೋನ ವೈರಸ್ ಸೋಂಕಿನ ಭೀತಿಯಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಯತೀಂದ್ರ, ಅಂಜಲಿ ನಿಂಬಾಳ್ಕರ್, ಜೆಡಿಎಸ್ನ ಎಂ.ಶ್ರೀನಿವಾಸ್, ಬಿಜೆಪಿಯ ಸತೀಶ್ ರೆಡ್ಡಿ, ರಾಜೇಶ್ ನಾಯ್ಕಿ ಸೇರಿದಂತೆ ಹಲವು ಸದಸ್ಯರು ಮುಖಕ್ಕೆ ಮಾಸ್ಕ್ ಧರಣಿ ಕಲಾಪದಲ್ಲಿ ಪಾಲ್ಗೊಂಡಿದ್ದರು.