ಶ್ರೀಕ್ಷೇತ್ರ ಧರ್ಮಸ್ಥಳದ ನಂದಾದೀಪ ನಂದಿದ ವದಂತಿ
ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ ಶ್ರೀ ಕ್ಷೇತ್ರ
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿಯ ಪೋಸ್ಟ್
ಬೆಂಗಳೂರು, ಮಾ.27: ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ಮಿತಿ ಮೀರುತ್ತಿದ್ದು, ದೇಶವೇ ಲಾಕ್ ಡೌನ್ನಿಂದ ಜನಸಾಮಾನ್ಯರು ಕಂಗೆಟ್ಟಿದ್ದಾರೆ. ಆದರೆ, ಈ ನಡುವೆ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬುತ್ತಿದ್ದು ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ನಂದಾದೀಪ ನಂದಿ ಹೋಗಿದೆ ಎಂಬ ವಂದತಿ ರಾಜ್ಯದಲ್ಲಿ ಹರಡಿದೆ.
ನಂದಾದೀಪ ನಂದಿದರೆ ರಾಜ್ಯಕ್ಕೆ ಕೇಡುಗಾಲ. ಹೀಗಾಗಿ ಎಲ್ಲರೂ ತಮ್ಮ ಮನೆಯ ಮುಂದೇ ಮುಂಜಾನೆ ಸೂರ್ಯ ಉದಯಿಸುವ ಮೊದಲೇ ದೀಪ ಹಚ್ಚಿ ಇಡಬೇಕು ಎಂದು ಜನರು ಒಬ್ಬರಿಂದ ಒಬ್ಬರಿಗೆ ಸುದ್ದಿ ಹಬ್ಬಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ವದಂತಿ ಹಬ್ಬಿರುವುದು ಗಮನಕ್ಕೆ ಬಂದಿದ್ದು, ದೀಪ ನಂದಿದ ಸುದ್ದಿ ಸುಳ್ಳು ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಸ್ಪಷ್ಟನೆ ನೀಡಿದ್ದರೂ, ವದಂತಿ ನಿಲ್ಲುತ್ತಿಲ್ಲ. ಕೆಲವರು ವಾಟ್ಸ್ಯಾಪ್ ಮತ್ತು ಜಾಲತಾಣಗಳಲ್ಲಿ ಶೇರ್ ಮಾಡುತ್ತಿದ್ದಾರೆ.
ಶ್ರೀ ಕ್ಷೇತ್ರ ಸ್ಪಷ್ಟನೆ: ಶ್ರೀ ಕ್ಷೇತ್ರ ಮಂಜುನಾಥ ಸ್ವಾಮಿ ದೇವಳದ ನಂದಾದೀಪ ನಂದಿರುವ ಬಗ್ಗೆ ಸುಳ್ಳು ಸುದ್ದಿ. ಇಂತಹ ಸನ್ನಿವೇಶ ಉದ್ಬವಿಸಿಲ್ಲ ಎಂದು ದೇವಸ್ಥಾನದ ಮುಖ್ಯಸ್ಥರು ಸ್ಪಷ್ಟನೆ ನೀಡಿದ್ದಾರೆ.
ದೀಪ ನಂದಿ ಹೋದರೆ ಕೇಡು
'ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದ ನಂದಾದೀಪ ನಂದಿ ಹೋಗಿದ್ದು, ಮಂಜಾನೆ ಐದು ಗಂಟೆಗೆ ಎದ್ದು ಸ್ನಾನ ಮಾಡಿ ನಮ್ಮ ಮನೆಯಲ್ಲಿ ದೀಪ ಹಚ್ಚಿದ್ದೇನೆ. ಕೊರೋನ ಸೋಂಕು ಹರಡುತ್ತಿರುವ ವೇಳೆ ಶ್ರೀಕ್ಷೇತ್ರದ ದೀಪ ನಂದಿರುವುದು ಕೇಡುಗಾಲದ ಮುನ್ಸೂಚನೆ'
ಲಕ್ಷ್ಮೀ, ಗೃಹಿಣಿ ಚಿತ್ರದುರ್ಗ