ಬಿಬಿಎಂಪಿ ಮಾರುಕಟ್ಟೆಗಳ ಮಳಿಗೆ ಮಾಲಕರಿಗೆ ಮೂರು ತಿಂಗಳ ಬಾಡಿಗೆ ವಿನಾಯಿತಿ
ಬೆಂಗಳೂರು, ಮಾ.28: ಬಿಬಿಎಂಪಿ ಮಾರುಕಟ್ಟೆಗಳಲ್ಲಿ ಮಳಿಗೆಗಳನ್ನ ಹೊಂದಿರುವ ಬಾಡಿಗೆದಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಕೊರೋನ ಲಾಕ್ಡೌನ್ನಿಂದ ವ್ಯಾಪಾರ ವಹಿವಾಟು ಸ್ತಬ್ಧಗೊಂಡಿರುವ ಹಿನ್ನೆಲೆಯಲ್ಲಿ ಅಂಗಡಿ ಮಾಲಕರಿಗೆ ಮುಂದಿನ ಮೂರು ತಿಂಗಳ ಬಾಡಿಗೆ ವಿನಾಯಿತಿ ನೀಡಬಹುದು, ಇದಕ್ಕೆ ಅವಕಾಶವಿದೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಪಾಲಿಕೆ ಆಯುಕ್ತ ಅನಿಲ್ ಕುಮಾರ್, ಕಲಾಸಿಪಾಳ್ಯದಲ್ಲಿ ಜನಸಂದಣಿ ಹೆಚ್ಚಾಗಿರುವ ಕಾರಣ, ಇವತ್ತು ಹೋಲ್ ಸೇಲ್ ಮಾರಾಟಗಾರರು ನ್ಯಾಷನಲ್ ಮಾರುಕಟ್ಟೆಗೆ ಶಿಫ್ಟ್ ಆಗಿದ್ದಾರೆ. ಇದರಿಂದ ಗೊಂದಲ ಸೃಷ್ಟಿಯಾಗಿದ್ದು, ಈಗ ನ್ಯಾಷನಲ್ ಗ್ರೌಂಡ್ ಮೈದಾನದಿಂದ ವ್ಯಾಪಾರಿಗಳನ್ನ ಹೊರಗೆ ಕಳುಹಿಸಲಾಗಿದೆ. ಹಿಂದೊಮ್ಮೆ ಕಲಾಸಿಪಾಳ್ಯ ಮಾರುಕಟ್ಟೆ ಶಿಫ್ಟ್ ಮಾಡುವ ಬಗ್ಗೆ ಪ್ರಸ್ತಾವನೆ ಬಂದಿತ್ತು.
ಇದೀಗ ಕೊರೋನ ಸೋಂಕು ಹರಡುವ ಭೀತಿ ಹೆಚ್ಚಾಗಿದೆ, ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ, ಕಲಾಸಿಪಾಳ್ಯ ಹೋಲ್ ಸೇಲ್ ಮಾರುಕಟ್ಟೆಯಲ್ಲಿನ 423 ಅಂಗಡಿಗಳನ್ನ ಹೊಸೂರು ರಸ್ತೆಯಲ್ಲಿರೋ ಸಿಂಗೇನ ಅಗ್ರಹಾರಕ್ಕೆ ಶಿಫ್ಟ್ ಮಾಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದ್ದಾರೆ.