ವಿಜಯ ಕರ್ನಾಟಕ ದಿನಪತ್ರಿಕೆ ವಿರುದ್ಧ ಕಾನೂನು ಕ್ರಮಕ್ಕೆ ವೆಲ್ಫೇರ್ ಪಾರ್ಟಿ ಆಗ್ರಹ
“ಪ್ರಚೋದನಾಕಾರಿ ವರದಿ ಪ್ರಕಟ”
ಬೆಂಗಳೂರು, ಮಾ. 29: ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಮಾ.28ರಂದು ಮೊದಲ ಪುಟ್ಟದಲ್ಲಿ ‘ಸತ್ತವರೆಲ್ಲ ಒಂದೆ ಸಮುದಾಯದವರು’ ಎಂಬ ತಲೆಬರಹದಲ್ಲಿ ವರದಿಯೊಂದು ಪ್ರಕಟವಾಗಿದ್ದು, ಈ ವರದಿಯು ಕೋಮು ಪ್ರಚೋದನಾಕಾರಿ ವರದಿಯಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೀರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ‘ವಾರ್ತಾಭಾರತಿ’ ಜೊತೆ ಮಾತನಾಡಿದ ಅವರು, ರಾಜ್ಯ ಸರಕಾರ ಈ ಕೂಡಲೆ ಒಂದು ಧರ್ಮದ ಭಾವನೆಗಳನ್ನು ಕೆರಳಿಸಿ, ಸಮಾಜದಲ್ಲಿ ದೊಂಬಿ, ಗಲಭೆಗೆ ಕುಮ್ಮಕ್ಕು ನೀಡುವ ಪತ್ರಿಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ವಿಶ್ವದಾದ್ಯಂತ ವ್ಯಾಪಿಸಿರುವ ಕೊರೋನ ವೈರಸ್ ನಮ್ಮ ರಾಜ್ಯದಲ್ಲಿ ಹಬ್ಬಲು ಮುಸ್ಲಿಮರು ಕಾರಣವೆಂಬಂತೆ ಚಿತ್ರೀಕರಿಸಿರುವ ಈ ವರದಿಯ ಹಿಂದೆ ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ಸಮುದಾಯದ ವಿರುದ್ಧ ಸಮಾಜದ ಜನರನ್ನು ಎತ್ತಿಕಟ್ಟುವ ಷಡ್ಯಂತ್ರವಿದೆ ಎಂದು ಅವರು ಆರೋಪಿಸಿದರು.
ಕೋವಿಡ್-19ರ ಭೀತಿಯಲ್ಲಿ ಸಮಾಜದಲ್ಲಿನ ಆತಂಕವನ್ನು ಈ ವರದಿ ಇಮ್ಮಡಿಗೊಳಿಸಿದೆ. ಈ ಕೂಡಲೆ ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕರು, ಸಂಪಾದಕೀಯ ಮಂಡಳಿ, ಮಾಲಕರು, ಪಾಲುದಾರರು ಮತ್ತು ಮುದ್ರಣಗಾರರ ವಿರುದ್ಧ ದೂರು ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈಗಾಗಲೆ, ಈ ಸಂಬಂಧ ಮುಖ್ಯಮಂತ್ರಿ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರ ಸಲ್ಲಿಸಿರುವುದಾಗಿ ತಾಹೀರ್ ಹುಸೇನ್ ತಿಳಿಸಿದರು.