ಸರಕಾರ ಇದೆಯೋ-ಇಲ್ಲವೋ ಎಂಬ ಅನುಮಾನ ಮೂಡಿದೆ: ಸಿದ್ದರಾಮಯ್ಯ
ಬೆಂಗಳೂರು, ಎ.5: ರಾಜ್ಯದಲ್ಲಿ ಕೊರೋನ ವೈರಸ್ ನೆಪದಲ್ಲಿ ಕೃಷಿ- ತೋಟಗಾರಿಕೆ, ರೇಶ್ಮೆ ಮುಂತಾದ ವ್ಯವಸಾಯ ಸಂಬಂಧಿ ಕ್ಷೇತ್ರಗಳಲ್ಲಿ ಭೀಕರ ಸಮಸ್ಯೆಗಳು ಉದ್ಭವಿಸಿದ್ದು, ರಾಜ್ಯ ಸರಕಾರ ಕೂಡಲೇ ಮೇಲ್ಕಂಡ ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ರವಿವಾರ ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಅವರು, ಪ್ರವಾಹ ಮತ್ತು ಬರಗಳ ಸಂಕಷ್ಟಕ್ಕೆ ಸಿಲುಕಿ ನಲುಗಿ ಹೋಗಿರುವ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾರದೆ ಹೊಲದಲ್ಲೆ ಹೂತು ಹಾಕುತ್ತಿದ್ದಾರೆ. ತಿಪ್ಪೆಗೆ ಚೆಲ್ಲುತ್ತಿರುವ ಪ್ರಕರಣಗಳು ಗಮನಕ್ಕೆ ಬರುತ್ತಿವೆ. ಇದರಲ್ಲಿ ಹೂವು, ತರಕಾರಿ, ಹಣ್ಣುಗಳ ಬೆಲೆದ ರೈತರ ಕಷ್ಟ ಹೇಳತೀರದಾಗಿದೆ ಎಂದು ಗಮನ ಸೆಳೆದಿದ್ದಾರೆ.
ಇದೇ ಸಂದರ್ಭದಲ್ಲಿ ನಗರ ಮತ್ತು ಪಟ್ಟಣ ಪ್ರದೇಶದ ಜನರು ಹಣ್ಣು-ತರಕಾರಿ ಸಿಗದೆ ಪರದಾಡುತ್ತಿದ್ದಾರೆ. ಸಮರ್ಪಕ ಪೂರೈಕೆ ಇಲ್ಲದೆ ಸಂತೆ ಮತ್ತು ಎಪಿಎಂಸಿ ಮಳಿಗೆಗಳಲ್ಲಿ ಜನ ಗುಂಪು ಗೂಡುತ್ತಿದ್ದಾರೆ. ಬೆಳೆದ ರೈತ ಮತ್ತು ಗ್ರಾಹಕ ಇಬ್ಬರಿಗೂ ಏಕಕಾಲದಲ್ಲಿ ಸಂಕಷ್ಟ ಬಂದಿರುವುದರಿಂದ ಅರಾಜಕ ವಾತಾವರಣ ಉಂಟಾಗಿದೆ. ತಾವು ಬೆಳೆದ ಬೆಳೆಗಳನ್ನು ಕಷ್ಟ ಪಟ್ಟು ಮಾರುಕಟ್ಟೆಗೆ ಸಾಗಿಸದೆ ಹೋದರೆ ಪೊಲೀಸರು, ಆರ್ಟಿಓಗಳು ಲಂಚ ಕೊಡದೆ ವಾಹನಗಳನ್ನು ಬಿಡುತ್ತಿಲ್ಲ ಎಂಬ ದೂರುಗಳು ಬರುತ್ತಿವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೆಲ್ಲ ನೋಡಿದರೆ ಸರಕಾರ ಇದೆಯೋ-ಇಲ್ಲವೋ ಎಂಬ ಅನುಮಾನ ಜನ ಸಾಮನ್ಯರಲ್ಲಿ ಉಂಟಾಗುತ್ತಿದೆ. ಈ ನಡುವೆ ಈ ತಿಂಗಳಿನಿಂದ ರಾಜ್ಯದಲ್ಲಿ ಅಪಾರ ಪ್ರಮಾಣದ ಮಾವು ಮಾರುಕಟ್ಟೆಗೆ ಬರುತ್ತಿತ್ತು. ವಿಮಾನ, ರೈಲುಗಳಿಲ್ಲದೆ ಬೆಳೆದ ಫಸಲನ್ನು ಹೊರ ರಾಜ್ಯಗಳಿಗೆ, ವಿದೇಶಗಳಿಗೆ ಸಾಗಿಸಲಾಗುವುದಿಲ್ಲ. ಇದರಿಂದ ಬೆಲೆ ಕುಸಿಯಬಹುದು. ಹಾಗೆ ಆಗದಂತೆ ಸರಕಾರ ನೋಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಮಲೆನಾಡು, ಅರೆ ಮಲೆನಾಡು ಸೇರಿ ಬಯಲುಸೀಮೆಯ ಕೆಲ ಕಡೆಗಳಲ್ಲಿ ಮುಂಗಾರಿನಲ್ಲೆ ಬೆಳೆಗಳನ್ನು ಬಿತ್ತುತ್ತಾರೆ. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಇನ್ನೂ ಸಮರ್ಪಕವಾಗಿ ಮಾಡಿಕೊಂಡಿಲ್ಲ. ಅನೇಕ ಕಡೆಗಳಲ್ಲಿ ಬಿತ್ತನೆಗೆ ಅಗತ್ಯವಾದ ಬೀಜ, ಗೊಬ್ಬರ ಸಿಗುತ್ತಿಲ್ಲ. ಇದನ್ನು ಅರಿತುಕೊಂಡು ರೈತರ ಮತ್ತು ಗ್ರಾಹಕರ ಸಮಸ್ಯೆ ಸಮರ್ಪವಾಗಿ ನಿಭಾಯಿಸಬೇಕೆಂದು ಸಿದ್ದರಾಮಯ್ಯ ಪತ್ರದಲ್ಲಿ ಆಗ್ರಹಿಸಿದ್ದಾರೆ.