ಅಸಂಘಟಿತರಿಗೆ ನೆರವು ನೀಡಲು ಆಗ್ರಹಿಸಿ ಸಿಪಿಎಂನಿಂದ ವಾಟ್ಸ್ ಆ್ಯಪ್ ಅಭಿಯಾನ
ಬೆಂಗಳೂರು, ಎ.23: ಬಿಬಿಎಂಪಿ ಬಜೆಟ್ ನಲ್ಲಿ ಕೋವಿಡ್ 19 ಲಾಕ್ಡೌನ್ ಸಂತ್ರಸ್ತ ಅಸಂಘಟಿತ ಕಾರ್ಮಿಕರಾದ ಆಟೋ ಚಾಲಕರು, ಮನೆಕೆಲಸಗಾರರು, ಬೀದಿ ಬದಿ ವ್ಯಾಪಾರಿಗಳು, ಮ್ಯಕಾನಿಕ್ಗಳು, ದೋಬಿಗಳು, ದರ್ಜಿಗಳು, ಕ್ಷೌರಿಕರು ಮುಂತಾದವರಿಗೆ ಕನಿಷ್ಟ ಎರಡು ಸಾವಿರ ಹಣಕಾಸಿನ ನೆರವನ್ನು ನೀಡಬೇಕೆಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ರ್ಸ್ ವಾದಿ)ದಿಂದ ವಾಟ್ಸ್ ಆ್ಯಪ್ ಸಂದೇಶ ಕಳಿಸುವ ಅಭಿಯಾನವನ್ನು ಹಮ್ಮಿಕೊಂಡಿದೆ.
ಎಪ್ರಿಲ್ 22ರಂದು ಶೇ.30 ಖರ್ಚಿಗೆ ಲೇಕಾನುಧಾನ ಪಡೆದುಕೊಂಡಿರುವ ಬಿಬಿಎಂಪಿಯು ಪ್ರತಿ ವಾರ್ಡಿಗೆ ಮೀಸಲಿರಿಸಿರುವ ಅಭಿವೃದ್ಧಿ ನಿಧಿಯಲ್ಲಿ ಕೇವಲ 20 ಲಕ್ಷ ರೂಗಳನ್ನು ಕೋವಿಡ್ 19 ಪರಿಹಾರ ಕಾರ್ಯಕ್ಕೆ ಮೀಸಲಿರಿಸಿದೆಯೆ ವಿನಹ ಆರ್ಥಿಕ ನೆರವನ್ನು ನೀಡಲು ಮುಂದಾಗದಿರುವುದು ಬಿಬಿಎಂಪಿಯಲ್ಲಿನ ಆಡಳಿತಾರೂಢ ಬಿಜೆಪಿಯು ಅಸಂಘಟಿತರ ಕುರಿತು ತೋರುತ್ತಿರುವ ಅಸಡ್ಡೆಯನ್ನು ತೋರುತ್ತದೆ ಎಂದು ಸಿಪಿಎಂ ಖಂಡಿಸಿದೆ.
ಕೂಡಲೆ ಕನಿಷ್ಟ ಒಂದು ಶೇಕಡ ಹಣವನ್ನು ಮೀಸಲಿಟ್ಟು 6 ಲಕ್ಷ ಅಸಂಘಟಿತ ಕಾರ್ಮಿಕರಿಗೆ ರೂ.2000 ಆರ್ಥಿಕ ನೆರವನ್ನು ನೀಡಲು ಅಗತ್ಯ ಕ್ರಮಗಳನ್ನು ವಹಿಸಬೇಕೆಂದು ಒತ್ತಾಯಿಸಿ ಈ ವಾಟ್ಸಾಪ್ ಸಂದೇಶ ಅಭಿಯಾನವನ್ನು ಹಮ್ಮಿಕೊಂಡಿದೆ. ಬಿಜೆಪಿಗೆ ಕನಿಷ್ಟ ಮಾನವೀಯ ಅಂತಃಕರಣ ಇದ್ದರೆ ಇಂತಹ ನೆರೆವನ್ನ ನೀಡಲು ಮುಂದಾಗುತ್ತದೆ. ಇಲ್ಲವಾದರೆ ತನ್ನ ಬಂಡವಾಳಗಾರರ ಸಿರಿವಂತರ ಪರ ನೀತಿಗಳನ್ನು ಮುಂದುವರಿಸಲಿದೆ ಎಂದು ಸಿಪಿಐ(ಎಂ) ಖಂಡಿಸಿದೆ. ಅಸಂಘಟಿತರು ಲಕ್ಷಾಂತರ ಸಂಖ್ಯೆಯಲ್ಲಿ ವಾಟ್ಸ್ ಆ್ಯಪ್ ಸಂದೇಶ ಕಳುಹಿಸಿ ಅಭಿಯಾನವನ್ನು ಯಶಸ್ವಿ ಮಾಡಿ ಬಿಬಿಎಂಪಿಯು ಅಸಂಘಟಿತರಿಗೆ ಮಾಡಿರುವಂತೆ ಮಾಡಬೇಕೆಂದು ಸಿಪಿಐ(ಎಂ) ಕೋರಿದೆ.