ಮದ್ಯದ ಅಮಲಿನಲ್ಲಿ ಗಲಾಟೆ ಮಾಡಿ ಯುವಕನ ಕೊಲೆಗೈದ ಪ್ರಕರಣ: ಇಬ್ಬರ ಸೆರೆ
ಬೆಂಗಳೂರು, ಮೇ 12: ಮದ್ಯ ಅಮಲಿನಲ್ಲಿ ಗಲಾಟೆ ಮಾಡಿ ಯುವಕನನ್ನು ಕೊಲೆ ಮಾಡಿದ ಆರೋಪ ಪ್ರಕರಣ ಸಂಬಂಧ ಇಬ್ಬರನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಆರ್ಟಿ ನಗರದ ರಾಜೇಶ್ ಕುಮಾರ್(32), ಸುಜಿತ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಮೇ 6ರಂದು ಮೋತಿನಗರದ ರಾಜೇಶ್ ಕುಮಾರ್ ಅವರ ನಿವಾಸದಲ್ಲಿ ಬಾಡಿಗೆಗಿದ್ದ ತನ್ನ ಮಗ ಕಿಶೋಕ್ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಆರೋಪಿಸಿ ಮೃತನ ತಾಯಿ ಆರ್ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಸಿದ್ದರು. ಈ ಸಂಬಂಧ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೃತ ಕಿಶೋರ್ ಹಾಗೂ ಆರೋಪಿಗಳು ಸ್ನೇಹಿತರಾಗಿದ್ದು, ಆಗಾಗ ಒಟ್ಟಿಗೆ ಸೇರಿ ಮದ್ಯ ಸೇವನೆ ಮಾಡುತ್ತಿದ್ದರು. ಮೇ 6ರಂದು ಸಂಜೆ ಮೂವರು ಒಟ್ಟಿಗೆ ರಾಜೇಶ್ ಹಾಗೂ ಕಿಶೋರ್ ಗೆ ಸೇರಿದ ಬಾಡಿಗೆ ಮನೆಯಲ್ಲಿ ಮದ್ಯಪಾನ ಮಾಡುತ್ತಿದ್ದರು. ಆಗ ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆರಂಭವಾಗಿದ್ದು, ವಿಕೋಪಕ್ಕೆ ತಿರುಗಿದ ಪರಿಣಾಮ ಸ್ನೇಹಿತರಾದ ರಾಜೇಶ್ ಹಾಗೂ ಸುಜಿತ್ ಕುಮಾರ್, ಕಿಶೋರ್ ನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.