ಖಾಸಗಿ ಆಸ್ಪತ್ರೆಗಳನ್ನು ಮುಚ್ಚುವುದಿಲ್ಲ: ಆರೋಗ್ಯ ಸಚಿವ ಶ್ರೀರಾಮುಲು
ಬೆಂಗಳೂರು, ಮೇ 12: ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳು ದಾಖಲಾದ ಬಳಿಕ ಕೊರೋನ ಸೋಂಕು ದೃಢಪಟ್ಟಿರುವಂತಹ ಆಸ್ಪತ್ರೆಗಳನ್ನು ಮುಚ್ಚುವುದಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಖಾಸಗಿ ಆಸ್ಪತ್ರೆಗಳಿಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ರೂಪಿಸುವ ಸಂಬಂಧ ನಾಳೆ ಸಭೆ ನಡೆಸಲು ತೀರ್ಮಾನಗಳನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ. ಜಯನಗರ ಖಾಸಗಿ ಆಸ್ಪತ್ರೆಯೊಂದು ಅನಾರೋಗ್ಯ ಪೀಡಿತ ಮಹಿಳೆಯರನ್ನು ದಾಖಲು ಮಾಡಿಕೊಳ್ಳಲು ನಿರಾಕರಿಸಿ ಆ ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರೋಗಿಗಳನ್ನು ದಾಖಲು ಮಾಡಿಕೊಂಡ ಬಳಿಕ ಕೊರೋನ ಸೋಂಕು ದೃಢಪಟ್ಟಿರುವಂತ ಆಸ್ಪತ್ರೆಗಳನ್ನು ಮುಚ್ಚಲ್ಲ. ಈ ಬಗ್ಗೆ ಖಾಸಗಿ ಆಸ್ಪತ್ರೆಯವರು ಆತಂಕಪಡುವ ಅಗತ್ಯವಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿರುವ ರೋಗಿಗಳಲ್ಲಿ ಕೊರೋನ ಸೋಂಕು ದೃಢಪಟ್ಟರೆ ಆ ರೋಗಿ ಇರಿಸಲಾದ ವಾರ್ಡ್ ಅನ್ನು ಮಾತ್ರ ಸ್ಯಾನಿಟೈಸರ್ ಮಾಡಿ ಒಂದು ವಾರಗಳ ಕಾಲ ಮುಚ್ಚಲಾಗುವುದು. ಇಡೀ ಆಸ್ಪತ್ರೆ ಮುಚ್ಚಲ್ಲ, ಈ ಸಂಬಂಧ ನಾಳೆ ಸಭೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ರೋಗಿಗಳನ್ನು ದಾಖಲು ಮಾಡಿಕೊಳ್ಳದೇ ಚಿಕಿತ್ಸೆ ನೀಡಲು ನಿರಾಕರಿಸಿದರೆ ಅದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಜಯನಗರ ಖಾಸಗಿ ಆಸ್ಪತ್ರೆಯವರು ಮಹಿಳೆಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿ ಮಹಿಳೆ ಸತ್ಯಮ್ಮ ಎಂಬುವವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂದಿಸಿದಂತೆ ಮಹಿಳೆಯ ಪತಿಯ ಕ್ಷಮೆ ಕೋರಿರುವ ಸಚಿವರು, ಈ ಕುರಿತು ತನಿಖೆ ನಡೆಸಲಾಗುತ್ತದೆ. ಒಂದು ವೇಳೆ ಆಸ್ಪತ್ರೆಯ ಸಿಬ್ಬಂದಿ ತಪ್ಪು ಮಾಡಿದರೆ ಕಠಿಣಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.