ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ: 32 ವಿಮಾನಗಳ ಹಾರಾಟ ರದ್ದು
ಸಾಂದರ್ಭಿಕ ಚಿತ್ರ
ಬೆಂಗಳೂರು, ಮೇ 25: ರಾಜ್ಯ ಸರಕಾರ ಹಾಕಿರುವ ಕೆಲವು ನಿರ್ಬಂಧಗಳಿಂದಾಗಿ ಬೆಂಗಳೂರಿನ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳಬೇಕಿದ್ದ 32 ವಿಮಾನಗಳ ಹಾರಾಟ ರದ್ದಾಗಿದೆ.
ಚೆನ್ನೈ, ಮಂಗಳೂರು, ವಿಶಾಖಪಟ್ಟಣಂ, ಕೊಲ್ಕತ್ತಾ, ಗೋವಾ, ಇಂದೋರ್, ಹೈದರಾಬಾದ್, ಮುಂಬೈ, ವಿಜಯವಾಡ, ಜೈಪುರಕ್ಕೆ ತೆರಳಬೇಕಿದ್ದ ವಿಮಾನಗಳು ರದ್ದಾಗಿವೆ. ವಿಮಾನ ನಿಲ್ದಾಣದ ಮಾಹಿತಿ ಪ್ರಕಾರ ಸಾಕಷ್ಟು ನಗರಗಳಿಗೆ ಬೆಂಗಳೂರಿನಿಂದ ವಿಮಾನ ಹಾರಾಟ ನಡೆಸಲಿದೆ. ಆದರೆ, ಅಲ್ಲಿಂದ ಬರುವ ವಿಮಾನಗಳಿಗೆ ತಡೆ ಹೇರಿದೆ.
ಬೆಂಗಳೂರಿನಿಂದ ಹೈದರಾಬಾದ್ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನವನ್ನು ಅಂತಿಮ ಹಂತದಲ್ಲಿ ತಡೆಹಿಡಿಯಲಾಯಿತು. ಪ್ರಯಾಣಿಕರು ಬೋರ್ಡಿಂಗ್ ಆಗುವಾಗ ವಿಮಾನ ಹಾರಾಟಕ್ಕೆ ನಿರ್ಬಂಧವಿರುವುದಾಗಿ ಮಾಹಿತಿ ನೀಡಲಾಗಿದೆ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಬೋರ್ಡಿಂಗ್ ಪಾಸ್ ಸ್ಕ್ಯಾನ್ ಮಾಡುವಾಗ ನಿಮ್ಮ ಬೋರ್ಡಿಂಗ್ ಕ್ಯಾನ್ಸಲ್ ಆಗಿದೆ ಎಂದು ಹೇಳಿದ್ದಾರೆ. ಏನು ಮಾಡಬೇಕು ಎಂದು ತೋಚುತ್ತಿಲ್ಲ ಎಂದು ಪ್ರಯಾಣಿಕರು ಹೇಳಿದ್ದಾರೆ.
ಸತತ 62 ದಿನಗಳ ನಿರ್ಬಂಧದ ಬಳಿಕ ದೇಶೀಯ ವಿಮಾನಗಳ ಹಾರಾಟ ಮೇ 25ರಿಂದ ದೇಶಾದ್ಯಂತ ಆರಂಭಗೊಂಡಿದೆ. ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಳ ಸರಕಾರಗಳು ತಮ್ಮ ರಾಜ್ಯಕ್ಕೆ ಸದ್ಯಕ್ಕೆ ವಿಮಾನ ಹಾರಾಟ ಬೇಡ ಎಂದು ಹೇಳಿವೆ. ಇದರಿಂದಲೂ ಆ ಭಾಗಕ್ಕೆ ತೆರಳಬೇಕಾಗಿದ್ದ ವಿಮಾನಗಳ ಹಾರಾಟವನ್ನು ರದ್ದು ಮಾಡಲಾಗಿದೆ.