ಪಾದರಾಯನಪುರ ಪ್ರಕರಣ: ಎಲ್ಲಾ 126 ಆರೋಪಿಗಳಿಗೆ ಹೈಕೋರ್ಟ್ ಜಾಮೀನು
ಬೆಂಗಳೂರು, ಮೇ 29: ಪಾದರಾಯನಪುರ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ 126 ಆರೋಪಿಗಳಿಗೂ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ. ಕುನ್ನಾ ಅವರಿದ್ದ ಏಕಸದಸ್ಯ ನ್ಯಾಯಪೀಠ, ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತು.
ಜೈಲಿನಿಂದ ಬಿಡುಗಡೆ ಮುನ್ನ ಎಲ್ಲರಿಗೂ ಕೋವಿಡ್-19 ಮಾರ್ಗಸೂಚಿ ಪಾಲಿಸಬೇಕು. ಇಲ್ಲವಾದರೆ ಮುಂದಿನ ದಿನ ಜಾಮೀನು ರದ್ದುಗೊಳ್ಳುವುದಾಗಿ ಷರತ್ತು ಹಾಕಿದ ನ್ಯಾಯಪೀಠ, ಆರೋಪಿಗಳಿಗೆ 1 ಲಕ್ಷ ರೂ.ಬಾಂಡ್, ಶ್ಯೂರಿಟಿ ಒದಗಿಸಬೇಕು ಎಂದು ಆದೇಶಿಸಿ ಜಾಮೀನು ಮಂಜೂರು ಮಾಡಿತು.
ಕೆಲ ದಿನಗಳ ಹಿಂದೆ ಬೆಂಗಳೂರಿನ ಪಾದರಾಯನಪುರದ ಏರಿಯಾದಲ್ಲಿ ಕೊರೋನ ವೈರಸ್ ಹಿನ್ನೆಲೆ ಸೀಲ್ಡೌನ್ ಮಾಡಲಾಗಿತ್ತು. ಅಧಿಕಾರಿಗಳು ಹಾಗೂ ಪೊಲೀಸರು ತೆರಳಿದ್ದ ವೇಳೆ ಸ್ಥಳಿಯರು ಗಲಾಟೆ ನಡೆಸಿದ್ದರು. ಅಲ್ಲದೆ, ಆರೋಗ್ಯ ಅಧಿಕಾರಿಗಳು ಅಳವಡಿಸಿದ್ದ ಶೀಟ್ಗಳನ್ನು ಕಿತ್ತು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದ ಆರೋಪದ ಮೇರೆಗೆ ಹಲವರನ್ನು ಬಂಧಿಸಲಾಗಿತ್ತು.