ಬೆಂಗಳೂರು: ವಲಸೆ ಕಾರ್ಮಿಕರಿಗೆ ಸೇವಾಸಿಂಧು ಪೋರ್ಟಲ್ನಲ್ಲಿ ನೋಂದಣಿ ಕಡ್ಡಾಯ
ಬೆಂಗಳೂರು, ಜೂ.2: ಊರಿಗೆ ಮರಳುವ ವಲಸೆ ಕಾರ್ಮಿಕರು ಸೇವಾಸಿಂಧು ಪೋರ್ಟಲ್ನಲ್ಲಿ ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಊರಿಗೆ ಮರಳುವ ಕಾರ್ಮಿಕರಿಗೆ ನೆರವಾಗಲು ಬಿಬಿಎಂಪಿ ಎಲ್ಲಾ ನಾಗರಿಕ ಸೇವಾ ಕೇಂದ್ರಗಳಲ್ಲಿ ವಲಸೆ ಕಾರ್ಮಿಕರ ಸಹಾಯ ಕೇಂದ್ರವನ್ನು ತೆರೆದಿದೆ.
ನಗರವನ್ನು ತ್ಯಜಿಸುತ್ತಿರುವ ವಲಸೆ ಕಾರ್ಮಿಕರು ಸ್ಥಳೀಯ ಆಡಳಿತಕ್ಕೆ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ. ಪಾಲಿಕೆಯು ಇಂತಹ ಕಾರ್ಮಿಕರ ಬಗ್ಗೆ ಮಾಹಿತಿ ಕಲೆಹಾಕುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
ವಲಸೆ ಕಾರ್ಮಿಕರ ಸಹಾಯ ಕೇಂದ್ರಗಳಲ್ಲಿ ಕನ್ನಡದ ಜೊತೆ ಹಿಂದಿ, ಇಂಗ್ಲಿಷ್ ಸಹಿತ ವಿವಿಧ ಭಾಷೆಗಳಲ್ಲಿ ಸೇವೆ ನೀಡಬೇಕು ಎಂದು ಸಹಾಯಕ ಕಂದಾಯ ಅಧಿಕಾರಿಗಳಿಗೆ ಬಿಬಿಎಂಪಿ ಸೂಚಿಸಿದೆ.
ಮತ್ತೆರಡು ವಾರ್ಡ್ಗಳಲ್ಲಿ ಕಂಟೈನ್ಮೆಂಟ್ ಪ್ರದೇಶ: ನಗರದಲ್ಲಿ ಜಯಮಹಲ್ ಹಾಗೂ ಚಲವಾದಿಪಾಳ್ಯ ವಾರ್ಡ್ಗಳಲ್ಲಿ ಸೋಂಕು ಕಾಣಿಸಿಕೊಂಡಿರುವುದರಿಂದ ಈ ವಾರ್ಡ್ಗಳಲ್ಲೂ ನಿಯಂತ್ರಿತ (ಕಂಟೈನ್ಮೆಂಟ್) ಪ್ರದೇಶಗಳನ್ನು ಗುರುತಿಸಲಾಗಿದೆ. ಇದರೊಂದಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ನಿಯಂತ್ರಿತ ಪ್ರದೇಶಗಳ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.