ಸರಕಾರದ ಹಿಂದಿನ ಮಾರ್ಗಸೂಚಿಯನ್ವಯ ಕ್ವಾರಂಟೈನ್: ಡಾ.ಸುಧಾಕರ್ ಸ್ಪಷ್ಟನೆ
ಬೆಂಗಳೂರು, ಜೂ. 22: ಕೋರೋನ ಸೋಂಕು ತಡೆಗಟ್ಟಲು ಸರಕಾರದ ಹಿಂದಿನ ಮಾರ್ಗಸೂಚಿ ಅನ್ವಯವೇ ಕ್ವಾರಂಟೈನ್ ನಿಯಮಗಳನ್ನು ಪಾಲಿಸಲಾಗುತ್ತಿದ್ದು, ಈಗಲೂ ಅದೇ ಮುಂದುವರಿದಿದೆ' ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, `ಕ್ವಾರಂಟೈನ್ಗೆ ಸಂಬಂಧಿಸಿದಂತೆ ಯಾವುದೇ ಹೊಸಸ ಮಾರ್ಗಸೂಚಿ ಮಾಡಲಾಗಿಲ್ಲ. ಅಂತರ್ ರಾಜ್ಯ ಪ್ರಯಾಣಿಕರು ಯಾವ ರಾಜ್ಯದಿಂದ ಆಗಮಿಸುತ್ತಿದ್ದಾರೆ ಎನ್ನುವುದರ ಮೇಲೆ ಅವರ ಕ್ವಾರಂಟೈನ್ ಅವಧಿ ಅವಲಂಬಿತವಾಗಿದೆ. ನನ್ನ ಟ್ವೀಟ್ಗೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ' ಎಂದು ವಿವರಣೆ ನೀಡಿದ್ದಾರೆ.
ಗೊಂದಲ ಮೂಡಿಸಿದ ಟ್ವೀಟ್: ಮಹಾರಾಷ್ಟ ರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ 7ದಿನ ಸಾಂಸ್ಥಿಕ ಮತ್ತು 7 ದಿನ ಮನೆಯಲ್ಲಿ ಕ್ವಾರಂಟೈನ್, ಹೊಸದಿಲ್ಲಿ, ತಮಿಳುನಾಡಿನಿಂದ ಆಗಮಿಸುವವರಿಗೆ 3 ದಿನ ಸಾಂಸ್ಥಿಕ ಮತ್ತು 11 ದಿನ ಮನೆ ಕ್ವಾರಂಟೈನ್, ಉಳಿದ ರಾಜ್ಯಗಳಿಂದ ಆಗಮಿಸುವವರಿಗೆ ಒಟ್ಟು 14 ದಿನಗಳ ಕಾಲ ಮನೆ ಕ್ವಾರಂಟೈನ್ ಮಾಡಲಾಗುವುದು ಎಂದು ಡಾ.ಸುಧಾಕರ್ ಮತ್ತೊಂದು ಟ್ವೀಟ್ ಮಾಡಿದ್ದು, ಸಾರ್ವಜನಿಕ ವಲಯದಲ್ಲಿ ಗೊಂದಲಕ್ಕೆ ಕಾರಣವಾಗಿತ್ತು.